ಬೆಂಗಳೂರು: ರಾಜ್ಯದ 55 ಎಪಿಎಂಸಿಗಳಲ್ಲಿ ಕೆಜಿಗೆ 130 ರೂಪಾಯಿಯಂತೆ ತೊಗರಿ ಬೇಳೆ ಮಾರಾಟಕ್ಕೆ ಆಹಾರ ಖಾತೆ ಸಚಿವ ಯು.ಟಿ.ಖಾದರ್ ಶುಕ್ರವಾರ ಯಶವಂತಪುರದ ಎಪಿಎಂಸಿ ಮಾರುಕಟ್ಟೆಯಲ್ಲಿ ಚಾಲನೆ ನೀಡಲಿದ್ದಾರೆ.
ಜನರ ಪ್ರಮುಖ ಆಹಾರ ಪದಾರ್ಥವಾಗಿರುವ ತೊಗರಿ ಬೇಳೆಗೆ ದರ ದುಬಾರಿಯಾಗಿರುವ ಹಿನ್ನೆಲೆಯಲ್ಲಿ ದರ ನಿಯಂತ್ರಿಸಲು ಸರ್ಕಾರ ಎಫ್ ಕೆಸಿಸಿಐ ಮತ್ತು ಬೇಳೆ ಮಾರಾಟಗಾರರ ಸಂಘದ ಸಹಯೋಗದಲ್ಲಿ ಮಾರಾಟ ಕೇಂದ್ರ ಆರಂಭಿಸುತ್ತಿದೆ.
ಸಾರ್ವಜನಿಕರು 2ರಿಂದ 10 ಕೆಜಿಯವರೆಗೆ ಪ್ಯಾಕ್ ಗಳಲ್ಲಿ ತೊಗರಿ ಖರೀದಿಸಬಹುದು. ಬೆಂಗಳೂರಿನಲ್ಲಿ 5 ಕಡೆ ಮಾರಾಟ ಕೇಂದ್ರಗಳು ಆರಂಭಗೊಳ್ಳಲಿವೆ. ಪ್ರಸ್ತುತ ಚಿಲ್ಲರೆ ಮಾರಾಟ ಕೇಂದ್ರ ಹಾಗೂ ಮಾಲ್ ಗಳಲ್ಲಿ 150ರಿಂದ 200 ರೂಪಾಯಿಯವರೆಗೆ ತೊಗರಿ ಬೇಳೆ ಮಾರಾಟ ಮಾಡಲಾಗುತ್ತಿದೆ. ಇದನ್ನು ನಿಯಂತ್ರಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ.
ರಾಜ್ಯದ ಇತರ ಜಿಲ್ಲೆಗಳಾದ ಮೈಸೂರು, ತುಮಕೂರು, ಮಂಡ್ಯ, ಕಲಬುರಗಿ, ಹುಬ್ಬಳ್ಳಿ, ಬೀದರ್, ತರಗುಪೇಟೆಗಳಲ್ಲಿ ಸಹ ಎಪಿಎಂಸಿಗಳಲ್ಲಿ ತೊಗರಿ ಬೇಳೆ ಮಾರಾಟ ಸಗಟು ದರದಲ್ಲಿ ಮಾರಾಟ ಮಾಡಲಿವೆ.