ಬೆಂಗಳೂರು: ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಬೆಳಗಾವಿ ನಗರ ತತ್ತರಿಸಿದೆ. ಬೆಳಗಾವಿಯಲ್ಲಿ ರಾಜ್ಯದಲ್ಲಿಯೇ ಅಧಿಕವೆನಿಸಿದ 11 ಸೆಂ.ಮೀ.ಮಳೆ ನಿನ್ನೆ ರಾತ್ರಿ ಸುರಿದಿದೆ. ಮಳೆಯಿಂದಾಗಿ ಅನೇಕ ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದರೆ, ಕೆಲವು ಕಡೆ ವಾಹನಗಳು ನೀರಿನಲ್ಲಿ ಅರ್ಧದಷ್ಟು ಮುಳುಗಿರುವ ಘಟನೆ ನಡೆದಿದೆ.
ಮಹಾರಾಷ್ಟ್ರದ ಕೊಂಕಣ ಭಾಗ ಮತ್ತು ಚಿಕ್ಕೋಡಿ ತಾಲೂಕಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಚಿಕ್ಕೋಡಿ ತಾಲೂಕಿನ ಐದು ಸೇತುವೆಗಳು ಭಾನುವಾರ ರಾತ್ರಿ ವೇಳೆಗೆ ಜಲಾವೃತಗೊಂಡು ಸಂಪರ್ಕ ಕಡಿದುಕೊಂಡಿವೆ. ಚಿಕ್ಕೋಡಿ ತಾಲೂಕಿನ ದೂಧಗಂಗಾ ನದಿಯ ಕಾರದಗಾ-ಭೋಜ, ಮಲಿಕವಾಡ-ದತ್ತವಾಡ ಮತ್ತು ವೇದಗಂಗಾ ನದಿಯ ಭೋಜವಾಡಿ-ಕುನ್ನೂರ, ಸಿದ್ನಾಳ-ಅಕ್ಕೋಳ, ಜತ್ರಾಟ-ಭೀವಸಿ ಸೇತುವೆಗಳ ಮೇಲೆ ಸುಮಾರು ಎರಡು ಅಡಿಯಷ್ಟು ನೀರು ನಿಂತು ಸಾರ್ವಜನಿಕ ಸಂಚಾರ ಕಡಿತಗೊಂಡಿದೆ.
ಮಲಿಕವಾಡ-ದತ್ತವಾಡ ಸೇತುವೆ ಮುಳುಗಡೆಯಾಗಿರುವುದರಿಂದ ಗಡಿ ಭಾಗದ ಕರ್ನಾಟಕ ಮಹಾರಾಷ್ಟ್ರ ಸಂಪರ್ಕ ಕಡಿತಗೊಂಡಿದ್ದು, ಸುತ್ತು ಬಳಸಿ ಪ್ರಯಾಣ ಅನಿವಾರ್ಯವಾಗಿದೆ.
Advertisement