ಮೈಸೂರು: ಕಸದ ಆಟೋದಲ್ಲಿ ಪತ್ತೆಯಾಯ್ತು ನವಜಾತ ಹೆಣ್ಣು ಶಿಶು

ನಗರದ ಸಯ್ಯಾಜಿರಾವ್ ರಸ್ತೆಯಲ್ಲಿ ಕಸದ ಆಟೋವೊಂದರಲ್ಲಿ ನವಜಾತ ಹೆಣ್ಣು ಶಿಶು ಪತ್ತೆಯಾಗಿದ್ದು, ಪೌರ ಕಾರ್ಮಿಕರು ಮಗುವನ್ನು ರಕ್ಷಿಸಿದ್ದಾರೆ..,..
ಕಸದ ಆಟೋದಲ್ಲಿ ಪತ್ತೆಯಾದ ನವಜಾತ ಶಿಶು
ಕಸದ ಆಟೋದಲ್ಲಿ ಪತ್ತೆಯಾದ ನವಜಾತ ಶಿಶು

ಮೈಸೂರು: ನಗರದ ಸಯ್ಯಾಜಿರಾವ್ ರಸ್ತೆಯಲ್ಲಿ ಕಸದ ಆಟೋವೊಂದರಲ್ಲಿ ನವಜಾತ ಹೆಣ್ಣು ಶಿಶು ಪತ್ತೆಯಾಗಿದ್ದು, ಪೌರ ಕಾರ್ಮಿಕರು ಮಗುವನ್ನು ರಕ್ಷಿಸಿದ್ದಾರೆ. ಪಾಲಿಕೆ ಕಸ ತುಂಬುವ ಆಟೋಗೆ ದುಷ್ಕರ್ಮಿಗಳು ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ಹಾಕಿದ್ದಾರೆ ಎನ್ನಲಾಗಿದೆ.

ಪಾಲಿಕೆ ಆಟೋ ಡ್ರೈವರ್ ಸರಾಯನಾನ ಮತ್ತು ಕ್ಲೀನರ್ ನಾಗರಾಜ್ ಎಂದಿನಂತೆ ಕಸ ತುಂಬಿಕೊಂಡು ಡಂಪ್ ಮಾಡಲು ಹೊರಟಿದ್ದರು. ಹೊರುವ ಮುನ್ನ ಟೀ ಕುಡಿದು ಆಟೋ ಹತ್ತಿರ ಬಂದ ಕಸದ ಚೀಲಗಳನ್ನು ಗಮನಿಸಿದ್ದಾರೆ. ಜೊತೆಗೆ ಪುನರ್ಬಳಕೆ ಮಾಡಬಹುದಾದ ವಸ್ತು ಇದೆಯೇ ಎಂದು ಪರಿಶೀಲಿಸಲು ಪ್ಲಾಸ್ಟಿಕ್ ಚೀಲ ಬಿಚ್ಚಿದ್ದಾರೆ.

ಆದರಲ್ಲಿ ಕೆಲವೇ ಗಂಟೆಗಳ ಹಿಂದೆ ಹುಟ್ಟಿದ್ದ ಹೆಣ್ಣು ಮಗುವೊಂದು ಚೀಲದಲ್ಲಿ ಪತ್ತೆಯಾಗಿದೆ. ಮಗು ಉಸಿರಾಡಲು ಕಷ್ಟ ಪಡುತ್ತಿತ್ತು. ಕೂಡಲೇ ಹೆಲ್ತ್ ಇನ್ಸ್ ಪೆಕ್ಟರ್ ಗೆ ಕರೆ ಮಾಡಿದ್ದಾರೆ. ಅವರ ಸಲಹೆಯಂತೆ ಪೊಲೀಸ್ ಠಾಣೆಗೆ ಮಗುವನ್ನು ತೆಗೆದು ಕೊಂಡು ಹೋಗಿ ಅಲ್ಲಿಂದ ಚೆಲುವಾಂಬ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮಗುವಿಗೆ ಆಕ್ಸಿಜನ್ ನೀಡಲಾಯ್ತು. ನವಜಾತ ಶಿಶುವಿಗೆ ಸೆಪ್ಟೇಸಿಮಿಯಾ ಎಂಬ ರಕ್ತ ಸಂಬಂಧ ರೋಗವಿರಬಹುದು ಎಂದು ಚೆಲುವಾಂಬ ಆಸ್ಪತ್ರೆಯ ಮೆಡಿಕಲ್ ಸೂಪರಿಂಡೆಂಟ್ ಡಾ. ರಾಧಾಮಣಿ ಹೇಳಿದ್ದಾರೆ.

ಶರವಣನ್ ಮತ್ತು ನಾಗರಾಜ್ ಅವರಿಗೆ ಮಗುವನ್ನು ರಕ್ಷಿಸಿದ ನೆಮ್ಮದಿಯಿದೆ. ಕಸದ ಚೀಲ ಎಂದು ಆ ಕವರ್ ಅನ್ನು ನಿರ್ಲಕ್ಷಿಸಿದಿದ್ದೇ ಮುಗ್ದ ಮಗುವೊಂದು ತನ್ನ ಜೀವ ಕಳೆದುಕೊಳ್ಳುತ್ತಿತ್ತು ಎಂದು ಕಳೆದ ನಾಲ್ಕು ವರ್ಷಗಳಿಂದ ಮೈಸೂರು ಮಹಾನಗರ ಪಾಲಿಕೆಯಲ್ಲಿ ಕೆಲಸ ಮಾಡುತ್ತಿರುವ ಶರವಣನ್ ತಿಳಿಸಿದ್ದಾರೆ.ಕೇವಲ ಕೆಲವೇ ಗಂಟೆಗಳ ಹಿಂದಷ್ಟೆ ಮಗು ಜನಸಿದ್ದು, ಮೈಯ್ಯೆಲ್ಲಾ ರಕ್ತದಿಂದ ಕೂಡಿತ್ತು ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com