ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ: ಉಭಯ ಸದನಗಳಲ್ಲಿ ಮುಂದುವರಿದ ಗದ್ದಲ, ಕೋಲಾಹಲ

ಡಿವೈಎಸ್ ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣ ಸಂಬಂಧ ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆ ನೀಡಬೇಕು ಹಾಗೂ ಪ್ರಕರಣದ...
ವಿಧಾನಸಭೆ ಕಲಾಪದಲ್ಲಿ ವಿಪಕ್ಷಗಳು ಸದನದ ಬಾವಿಗಿಳಿದು ಪ್ರತಿಭಟಿಸುತ್ತಿರುವುದು(ಸಾಂದರ್ಭಿಕ ಚಿತ್ರ)
ವಿಧಾನಸಭೆ ಕಲಾಪದಲ್ಲಿ ವಿಪಕ್ಷಗಳು ಸದನದ ಬಾವಿಗಿಳಿದು ಪ್ರತಿಭಟಿಸುತ್ತಿರುವುದು(ಸಾಂದರ್ಭಿಕ ಚಿತ್ರ)
ಬೆಂಗಳೂರು: ಡಿವೈಎಸ್ ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣ ಸಂಬಂಧ ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆ ನೀಡಬೇಕು ಹಾಗೂ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂಬ ವಿಪಕ್ಷಗಳ ಪ್ರತಿಭಟನೆ ವಿಧಾನಮಂಡಲದ ಉಭಯ ಸದನಗಳಲ್ಲಿ ಗುರುವಾರ ಕೂಡ ಮುಂದೂಡಿದೆ.
ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಅಹೋರಾತ್ರಿ ಧರಣಿ ನಡೆಸುತ್ತಿದ್ದ ಪ್ರತಿಪಕ್ಷಗಳ ಸದಸ್ಯರು ಗಣಪತಿ ಆತ್ಮಹತ್ಯೆ ಪ್ರಕರಣವನ್ನೇ ಇಂದು ಕೂಡ ಪ್ರಸ್ತಾಪಿಸಿದರು. ಕೂಡಲೇ ಅಲ್ಲಿ ಗದ್ದಲ, ಕೋಲಾಹಲ ಉಂಟಾಯಿತು. ನಿಯಂತ್ರಣಕ್ಕೆ ತರಲು ಸಾಧ್ಯವಾಗದ ಸ್ಪೀಕರ್ ಕೆ.ಬಿ. ಕೋಳವಾಡ ಆರಂಭದಲ್ಲಿ 20 ನಿಮಿಷಗಳ ಕಾಲ ವಿಧಾನಸಭೆ ಕಲಾಪವನ್ನು ಮುಂದೂಡಿದರು. 
ಮತ್ತೆ ಸಭೆ ಸೇರುತ್ತಿದ್ದಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯೇ ಇಲ್ಲ ಎಂದು ಬಿಜೆಪಿ ನಾಯಕ ಆರ್. ಅಶೋಕ್ ಆರೋಪಿಸಿದರು. ಧರಣಿ ನಿರತ ವಿಪಕ್ಷ ಸದಸ್ಯರು ಗೋವಿಂದಾ, ಗೋವಿಂದಾ ಎಂದು ಕೂಗುತ್ತ ಸದನದ ಬಾವಿಗಿಳಿದು ಪ್ರತಿಭಟನೆಗೆ ಮುಂದಾದರು.
ಸ್ಪೀಕರ್ ಕೋಳಿವಾಡ ಮೂರು ವಿಧೇಯಕವನ್ನು ಮಂಡಿಸಲು ಮುಂದಾದರು. ಕರ್ನಾಟಕ ರಾಜ್ಯ ಮುಕ್ತ ವಿವಿ ವಿಧೇಯಕ, ಕರ್ನಾಟಕ ರಾಜ್ಯ ಸಹಕಾರ ಸಂಘ ವಿಧೇಯಕ, ರಾಜ್ಯ ಕಾನೂನು ವಿಶ್ವವಿದ್ಯಾಲಯಗಳ ತಿದ್ದುಪಡಿ ವಿಧೇಯಕವನ್ನು ಸ್ಪೀಕರ್ ಮಂಡಿಸಿದರು.  ಆಗ ವಿಪಕ್ಷ ಸದಸ್ಯರು ವಿಧೇಯಕಗಳ ಪ್ರತಿ ಹರಿದುಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. 
ಆಗ ಸ್ಪೀಕರ್ ಅವರು ತಮ್ಮ ಕಚೇರಿಯಲ್ಲಿ ಸರ್ವಪಕ್ಷ ಸಭೆಯನ್ನು ಕರೆದು ಕಲಾಪವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿದರು. ಇದೀಗ ಸ್ಪೀಕರ್ ನೇತೃತ್ವದಲ್ಲಿ ಸರ್ವಪಕ್ಷ ಸಭೆ ನಡೆಯುತ್ತಿದೆ.
ಇನ್ನು ಮೇಲ್ಮನೆಯಲ್ಲಿ ಪರಿಸ್ಥಿತಿ ಇದಕ್ಕೆ ಭಿನ್ನವಾಗಿರಲಿಲ್ಲ. ಮುಖ್ಯಮಂತ್ರಿ ಭಾಷಣಕ್ಕೆ ಪ್ರತಿಪಕ್ಷ ನಾಯಕರು ಅಡ್ಡಿಪಡಿಸಿದರು. ಆಡಳಿತ-ವಿಪಕ್ಷಗಳ ಮಧ್ಯೆ ವಾಕ್ಸಮರ ಉಂಟಾಯಿತು. ವಿಧಾನ ಪರಿಷತ್ತಿನಲ್ಲಿ ಈ ಮೂರೂ ವಿಧೇಯಕಗಳಿಗೆ ಅಂಗೀಕಾರ ಸಿಕ್ಕಿದೆ. ಕೊನೆಗೆ ಕಲಾಪ ಮುಂದುವರಿಸಲಾಗದೆ ಸಭಾಪತಿ ಡಿ.ಎಚ್.ಶಂಕರಮೂರ್ತಿ ಕಲಾಪವನ್ನು ನಾಳೆಗೆ ಮುಂದೂಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com