ಹುಬ್ಬಳ್ಳಿ/ ಮೈಸೂರು: ಕಾಳಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಮೂವರು ಅರಣ್ಯಾಧಿಕಾರಿಗಳ ಮೇಲೆ ಹಳಿಯಾಳ ತಾಲೂಕಿನ ಹಂದಲಿ ಗ್ರಾಮಸ್ಥರು ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಗಾಯಗೊಂಡ ಮೂವರು ಅರಣ್ಯಾಧಿಕಾರಿಗಳು ದಾಂಡೇಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗುತ್ತಿದ್ದಾರೆ.
ಈ ಭಾಗದ ಅರಣ್ಯ ಪ್ರದೇಶವನ್ನು ಗ್ರಾಮಸ್ಥರು ಅತಿಕ್ರಮಣ ಮಾಡಿಕೊಂಡಿದ್ದರು. ಒಂದು ಎಕರೆ ಒತ್ತುವರಿ ಮಾಡಿಕೊಂಡಿದ್ದ ಭೂಮಿಯನ್ನು ತೆರವುಗೊಳಿಸಲು ಹೋಗಿದ್ದ ಈ ಮೂವರು ಅಧಿಕಾರಿಗಳ ಮೇಲೆ ಹಲ್ಲೆ ಮಾಡಲಾಗಿತ್ತು. ಹಂದಲಿ ಗ್ರಾಮಸ್ಥರು ಈ ಜಾಗದಲ್ಲಿ ವ್ಯವಸಾಯ ಮಾಡುತ್ತಿದ್ದರು. ಜಾಗ ಖಾಲಿ ಮಾಡುವಂತೆ ಗ್ರಾಮಸ್ಥರಿಗೆ ತಿಳಿಸಲಾಗಿತ್ತು. ಆದರೆ ಅರಣ್ಯಾಧಿಕಾರಿಗಳಿಗೆ ಗ್ರಾಮಸ್ಥರು ಎಚ್ಚರಿಕೆ ನೀಡಿ ವಾಪಸ್ ಕಳುಹಿಸಿದ್ದರು.
ಸೋಮವಾರ ಗ್ರಾಮಸ್ಥರು ದೊಣ್ಣೆ ಹಾಗೂ ಆಯುಧಗಳಿಂದ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಅಧಿಕಾರಿಗಳನ್ನು ರಕ್ಷಿಸಲು ಮತ್ತೊಂದು ಅರಣ್ಯಾಧಿಕಾರಿಗಳ ತಂಡ ಬಂದಾಗ ಗ್ರಾಮಸ್ಥರು ಓಡಿ ಹೋಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇನ್ನೂ ಮೈಸೂರಿನಲ್ಲೂ ಕೂಡ ಅರಣ್ಯಾಧಿಕಾರಿಗಳ ಮೇಲೆ ಹಲ್ಲೆ ಮಾಡಿರುವ ಘಟನೆ ವರದಿಯಾಗಿದೆ. ಬಂಡಿಪುರ ಪಕ್ಕದ ಗ್ರಾಮದಲ್ಲಿ ಎರಡು ಚಿರತೆಗಳನ್ನು ಗ್ರಾಮಸ್ಥರೇ ಕೊಂದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಭೇಟಿ ನೀಡಿದ್ದ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಗ್ರಾಮಸ್ಥರು ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಅಧಿಕಾರಿಗಳು ಗ್ರಾಮಸ್ಥರ ವಿರುದ್ಧ ಹಲ್ಲೆ ನಡೆಸಿದ್ದಾರೆ.
Advertisement