ಧಾರವಾಡ: ಕಳಸಾ ಬಂಡೂರಿ ಹಾಗೂ ಮಹದಾಯಿ ನದಿ ಜೋಡಣೆ ಅನುಷ್ಠಾನಕ್ಕೆ ಆಗ್ರಹಿಸಿ ನಡೆಯುತ್ತಿರುವ ಹೋರಾಟಕ್ಕೆ ಒಂದು ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಹೋರಾಟಗಾರರು ಇಂದು ಧಾರವಾಡ, ಬೆಳಗಾವಿ, ಗದಗ ಮತ್ತು ಬಾಗಲಕೋಟೆ ಬಂದ್ಗೆ ಕರೆ ನೀಡಿದ್ದಾರೆ.
ಒಂದು ವರ್ಷ ಕಳೆದರೂ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಲೇ ಹೋರಾಟದ ಮೂಲ ಉದ್ದೇಶ ಈಡೇರಿಲ್ಲ ಎನ್ನುವುದು ಮಹಾದಾಯಿ ಹೋರಾಟ ಸಮನ್ವಯ ಸಮಿತಿಯ ಅಭಿಮತ. ರಾಜಕೀಯ ಜಡತ್ವಕ್ಕೆ ಬಿಸಿ ಮುಟ್ಟಿಸಲು ಶನಿವಾರ ‘ಕರಾಳ ದಿನ’ ಆಚರಿಸಲು ರೈತರು ನಿರ್ಧರಿಸಿದ್ದಾರೆ.
ಧಾರವಾಡದಲ್ಲಿ ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ರೈತರು ಮತ್ತು ವಿವಿಧ ಸಂಘಟನೆಗಳ ಹೋರಾಟಗಾರರು ನಗರದ ಜ್ಯುಬ್ಲಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಹೋರಾಟಗಾರರು ಟೈರ್ಗೆ ಬೆಂಕಿ ಹಚ್ಚಿ, ಕಪ್ಪು ಬಾವುಡ ಪ್ರದರ್ಶಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೊಷಣೆ ಕೂಗಿ ತಮ್ಮ ಆಕ್ರೋಶ ಹೊರಕಾಕುತ್ತಿದ್ದಾರೆ.
ಹುಬ್ಬಳ್ಳಿಯಲ್ಲೂ ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ರೈತ ಸೇನಾ ರಾಜ್ಯಧ್ಯಕ್ಷ ವೀರೇಶ ಸೊಬರದಮಠ ನೇತೃತ್ವದಲ್ಲಿ ರೈತರು ಹಳೇ ಮತ್ತು ಹೊಸ ಬಸ್ ನಿಲ್ದಾಣಕ್ಕೆ ಲಗ್ಗೆ ಹಾಕಿದ್ದು, ರೈಲ್ವೆ ನಿಲ್ದಾಣಕ್ಕೂ ತೆರಳಿ ರೈಲು ತಡೆಯಲು ಮುಂದಾಗಿದ್ದಾರೆ.
ಬೆಳಗಾವಿಯಲ್ಲೂ ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ವಿವಿಧ ರೈತರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಬಸ್ ನಿಲ್ದಾಣದ ಬಳಿ ಟೈರ್ಗೆ ಬೆಂಕಿ ಹಚ್ಚಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Advertisement