ಬೆಳಗಾವಿ: ಮಹಾರಾಷ್ಟ್ರ ಏಕೀಕರಣ ಸಮಿತಿ ಪಕ್ಷದ ಪಕ್ಷೇತರ ಶಾಸಕ ಸಂಭಾಜಿ ಪಾಟೀಲ ಹಾಗೂ ಪುತ್ರ ಸಾಗರ್ ಸೇರಿದಂತೆ 10 ಮಂದಿ ವಿರುದ್ಧ ಬೆಳಗಾವಿ ಮಹಿಳಾ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ದೂರು ದಾಖಲಾಗಿದೆ.
ಶಾಸಕ ಸಂಭಾಜಿ ಪಾಟೀಲ ಪುತ್ರ ಸಾಗರ್ ಅವರ ಪತ್ನಿ ಶೀತಲ್ ಪಾಟೀಲ್ ಈ ದೂರು ನೀಡಿದ್ದಾರೆ. ಮಾವ ಸಂಭಾಜಿ ಪಾಟೀಲ, ಅತ್ತೆ ಉಜ್ವಲಾ, ನಾದಿನಿಯರಾದ ಸಂಧ್ಯಾ, ನಿತೀನ ಪರೂಣಕರ, ಆಕೆಯ ಪತಿ ನಿತೀನ ಪರೂಣಕರ ಅವರು ತಮಗೆ 50 ಲಕ್ಷ ರೂ. ವರದಕ್ಷಿಣೆ ತರುವಂತೆ ಕಿರುಕುಳ ನೀಡಿ, ದೈಹಿಕ ಹಲ್ಲೆ ನಡೆಸಿದ್ದಾರೆ ಎಂದು ಶೀತಲ್ ದೂರು ಸಲ್ಲಿಸಿದ್ದಾರೆ.
ಈ ವಿಷಯ ಬಹಿರಂಗಪಡಿಸಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಕೂಡ ಹಾಕಿದ್ದಾರೆ ಎಂದು ವಿವರಿಸಿದ್ದಾರೆ. ತಮ್ಮ ಪತಿ ತಾವು ತವರು ಮನೆಯಲ್ಲಿದ್ದಾಗ ಎರಡನೇ ಮದುವೆಯಾಗಿದ್ದಾರೆ. ಇದಕ್ಕೆ ಶಾಸಕ ಸಂಭಾಜೀ ಪಾಟೀಲ್ ಹಾಗೂ ಅವರ ಪತ್ನಿ ಬೆಂಬಲ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಮಹಾರಾಷ್ಟ್ರದ ಪಂಢರಾಪುರದ ರಾಜಕಾರಣಿ ಬಜರಂಗ ಸಂಭಾಜಿ ಬಾಗಲ್ ಅವರ ಪುತ್ರಿ ಶೀತಲ್ ಹಾಗೂ ಶಾಸಕರ ಪುತ್ರ ಸಾಗರ್ ಮದುವೆ 2011ರ ಮೇ 30ರಂದು ನಡೆದಿತ್ತು. ಕಳೆದ ಕೆಲ ದಿನಗಳಿಂದ ದಂಪತಿ ಬೇರೆಯಾಗಿ ಜೀವಿಸುತ್ತಿದ್ದರು. ಆದರೆ ವಿಚ್ಛೇದನ ಪಡೆದಿಲ್ಲ ಎಂದು ಹೇಳಲಾಗಿದೆ.
Advertisement