ಬೆಂಗಳೂರು: ದ್ವಿತೀಯ ಪಿಯುಸಿ ಮರು ಮೌಲ್ಯಮಾಪನದ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಮರು ಮೌಲ್ಯಮಾಪನದ ನಂತರ ವಿಜ್ಞಾನ ವಿಭಾಗದಲ್ಲಿ ಮೈಸೂರಿನ ರಾಮಕೃಷ್ಣ ಆಶ್ರಮದ ವಿದ್ಯಾರ್ಥಿ ರವೀಶ್ ಸುರೇಶ್ ಬನ್ನಿಹಟ್ಟಿ ರಾಜ್ಯಕ್ಕೆ ಟಾಪರ್ ಆಗಿದ್ದಾರೆ.
ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ಹತ್ತು ಹಲವು ಯಡವಟ್ಟುಗಳ ಮೂಲಕ ಸುದ್ದಿಯಾಗಿದ್ದ ಪಿಯು ಬೋರ್ಡ್ ನ ಮತ್ತೊಂದು ಯಡವಟ್ಟಿನಿಂದಾಗಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಟಾಪರ್ ಅಗಬೇಕಾಗಿದ್ದ ರವೀಶ್ ಗೆ ಅನ್ಯಾಯವಾಗಿತ್ತು. ಇದೀಗ ಮರು ಮೌಲ್ಯಮಾಪನದಲ್ಲಿ ರವೀಶ್ ಗೆ ನ್ಯಾಯ ಸಿಕ್ಕಿದೆ.
ಪಿಯು ಫಲಿತಾಂಶ ಪ್ರಕಟಗೊಂಡಾಗ ರವೀಶ್ 600ಕ್ಕೆ 589 ಅಂಕ ಪಡೆದಿದ್ದ. ಇದೀಗ ಮರು ಮೌಲ್ಯ ಮಾಪನದ ಬಳಿಕ 597 ಅಂಕಗಳನ್ನು ಪಡೆದು ರಾಜ್ಯಕ್ಕೆ ಟಾಪರ್ ಎನಿಸಿಕೊಂಡಿದ್ದಾನೆ.
ಇಂಗ್ಲೀಷ್ ವಿಷಯದಲ್ಲಿ ರವೀಶ್ಗೆ ಅನ್ಯಾಯವಾಗಿದ್ದು 90ಅಂಕ ಮಾತ್ರ ನೀಡಲಾಗಿತ್ತು. ಆದರೆ ಹೆಚ್ಚು ಅಂಕ ಪಡೆಯುವ ಧೃಡ ವಿಶ್ವಾಸವಿದ್ದ ರವೀಶ್ ಉತ್ತರ ಪತ್ರಿಕೆಯ ನಕಲು ತರಿಸಿ ಪರಿಶೀಲಿಸಿದ್ದಾರೆ. ಆ ಬಳಿಕ ಮರು ಮೌಲ್ಯ ಮಾಪನಕ್ಕೆ ಅರ್ಜಿ ಹಾಕಿ ಮರು ಮೌಲ್ಯ ಮಾಪನದಲ್ಲಿ 98 ಅಂಕ ಬಂದಿದೆ.
ಸಿಇಟಿಯಲ್ಲೂ ಉತ್ತಮ ಸಾಧನೆ ಮಾಡಿರುವ ರವೀಶ್, ಮೆಡಿಕಲ್ ವಿಭಾಗದಲ್ಲಿ 56 ನೇ ರಾಂಕ್ ಪಡೆದಿದ್ದು ಮುಂದೆ ವೈದ್ಯ ಶಿಕ್ಷಣ ಆಯ್ಕೆ ಮಾಡಿಕೊಂಡಿದ್ದಾರೆ.
ಈ ಹಿಂದೆ ವಿಜ್ಞಾನ ವಿಭಾಗದಲ್ಲಿ 596 ಅಂಕ ಪಡೆದ ರಕ್ಷಿತಾ ತಮನ್ ರಾಜ್ಯಕ್ಕೆ ಟಾಪರ್ ಆಗಿದ್ದರು.