ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಸೇರಿದಂತೆ ಮೂವರು ಅಧಿಕಾರಿಗಳನ್ನು ಸುಮಾರು 6 ತಾಸು ಠಾಣೆಯಲ್ಲಿ ಕೂರಿಸಿದ್ದ ಎಸ್ಐ ನರೇಂದ್ರಬಾಬು ಅವರ ವರ್ತನೆ ಖಂಡಿಸಿ, ಉದ್ಯಾನದ ಸಿಬ್ಬಂದಿ ಶುಕ್ರವಾರ ಪ್ರಾಣಿಗಳಿಗೆ ಆಹಾರ ನೀಡದೆ ಪ್ರತಿಭಟನೆ ನಡೆಸಿದರು.
ಬೆಳಿಗ್ಗೆಯಿಂದ ಹಸಿದುಕೊಂಡೇ ಇದ್ದ ಪ್ರಾಣಿಗಳಿಗೆ ಆಹಾರ ಸಿಕ್ಕಿದ್ದು, ಸಂಜೆ 4ರ ಸುಮಾರಿಗೆ. ಅಂದರೆ, ಪ್ರತಿಭಟನೆ ಪೂರ್ಣಗೊಂಡ ಬಳಿಕ. ಕರ್ತವ್ಯಕ್ಕೆ ಹಾಜರಾಗದೆ ಸಿಬ್ಬಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರಿಂದ, ಉದ್ಯಾನದ ಎಲ್ಲ ಕಾರ್ಯಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಅಲ್ಲದೆ, ಈ ಕುರಿತು ಮಾಹಿತಿ ಇಲ್ಲದೆ ಉದ್ಯಾನ ವೀಕ್ಷಣೆಗೆ ಬಂದಿದ್ದ ಪ್ರವಾಸಿಗರು ವಾಪಸ್ ಹೋಗಬೇಕಾಯಿತು.
ಉದ್ದೇಶಪೂರ್ವಕವಾಗಿಯೇ ಬನ್ನೇರುಘಟ್ಟ ಠಾಣೆ ಎಸ್ಐ ಅವರು ಅಧಿಕಾರಿಗಳನ್ನು ಠಾಣೆಯಲ್ಲಿ ಕೂರಿಸಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಎಸ್ಐ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಫೆಬ್ರುವರಿ 7ರಂದು ವಿಬ್ ಗಯಾರ್ ಶಾಲೆ ಆವರಣಕ್ಕೆ ನುಗ್ಗಿದ್ದ ಚಿರತೆಯನ್ನು ಸೆರೆ ಹಿಡಿದಿದ್ದ ಅರಣ್ಯ ಇಲಾಖೆ ಸಿಬ್ಬಂದಿ, ನಂತರ ಬನ್ನೇರುಘಟ್ಟ ಜೈವಿಕ ಉದ್ಯಾನದ ಪ್ರಾಣಿ ಪುನರ್ವಸತಿ ಕೇಂದ್ರಕ್ಕೆ ಬಿಟ್ಟಿದ್ದರು. ಆದರೆ, ಫೆಬ್ರವರಿ 15ರ ಬೆಳಿಗ್ಗೆ ಚಿರತೆ ಅಲ್ಲಿಂದ ತಪ್ಪಿಸಿಕೊಂಡಿತ್ತು.
ಈ ಕುರಿತು ಸಾಮಾಜಿಕ ಕಾರ್ಯಕರ್ತ ಮೋಹನ್ ರಾಜ್ ಎಂಬುವರು ದೂರು ಠಾಣೆಗೆ ನೀಡಿದ್ದರು. ದೂರಿನ ಅನ್ವಯ ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಸಂತೋಷ್ ಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕುಶಾಲಪ್ಪ ಹಾಗೂ ವಲಯ ಅರಣ್ಯಾಧಿಕಾರಿ ಭಾಗ್ಯಲಕ್ಷ್ಮಿ ಅವರನ್ನು ವಿಚಾರಣೆ ನೆಪದಲ್ಲಿ ಠಾಣೆಗೆ ಕರೆದಿದ್ದ ಎಸ್ಐ, ಆರು ತಾಸು ಠಾಣೆಯಲ್ಲಿ ಕೂರಿಸಿಕೊಂಡಿದ್ದರು.
Advertisement