ಈ ದೇವರಿಗೆ ಮದ್ಯ, ಸಿಗರೇಟು, ಮಾಂಸದ ನೈವೇದ್ಯ!

ಕಾರವಾರ ನಗರದಲ್ಲಿರುವ ಕಾಪ್ರಿ ದೇವಸ್ಥಾನದ ವರ್ಷಾವಧಿ ಜಾತ್ರೆ ಸಾವಿರಾರು ಭಕ್ತರನ್ನು ಕೈ ಬೀಸಿ ಕರೆಯುತ್ತದೆ. ಇಲ್ಲಿಗೆ ಬರುವ ಭಕ್ತಾದಿಗಳು...
ಕಾಪ್ರಿ ದೇವರ ಮೂರ್ತಿ
ಕಾಪ್ರಿ ದೇವರ ಮೂರ್ತಿ

ಕಾರವಾರ: ಹೂವು, ಹಣ್ಣು, ತರಕಾರಿ, ಹಣ, ಮಾಂಸವನ್ನು ದೇವರಿಗೆ ಭಕ್ತರು ಅರ್ಪಿಸುವುದನ್ನು ನೋಡಿದ್ದೇವೆ, ಕೇಳಿದ್ದೇವೆ. ಆದರೆ ದೇವರಿಗೆ ಬೀಡಿ, ಸಿಗರೇಟು, ಮದ್ಯಗಳನ್ನು ಅರ್ಪಿಸುವುದನ್ನು ಕೇಳಿದ್ದಾರೆ. ಇಲ್ಲೊಂದು ದೇವಸ್ಥಾನದಲ್ಲಿ ಈ ಸಂಪ್ರದಾಯವಿದೆ.

ಕಾರವಾರ ನಗರದಲ್ಲಿರುವ ಕಾಪ್ರಿ ದೇವಸ್ಥಾನದ ವರ್ಷಾವಧಿ ಜಾತ್ರೆ ಸಾವಿರಾರು ಭಕ್ತರನ್ನು ಕೈ ಬೀಸಿ ಕರೆಯುತ್ತದೆ. ಎರಡು ದಿನಗಳ ಕಾಲ ನಡೆಯುವ ಜಾತ್ರೆಗೆ ಬರುವ ಭಕ್ತಾದಿಗಳು ಹೂವು-ಹಣ್ಣು, ತರಕಾರಿಗಳನ್ನು ಮಾತ್ರವಲ್ಲದೆ ಲಿಕ್ಕರ್, ಸೀಗರೇಟುಗಳನ್ನು ಕೂಡ ದೇವರಿಗೆ ಅರ್ಪಿಸುತ್ತಾರೆ. ಜಾತ್ರೆ ಸಮಯದಲ್ಲಿ ಮೇಕೆ ಬಲಿ, ಕೋಳಿಬಲಿಯೂ ನೆರವೇರುತ್ತದೆ.

ಈ ದೇವಸ್ಥಾನಕ್ಕೆ ಸುಮಾರು 500 ವರ್ಷಗಳ ಇತಿಹಾಸವಿದೆಯಂತೆ. ಮಾನವನ ರೂಪದಲ್ಲಿ ಕಾರ್ಪಿ ಮೂರ್ತಿ ಪತ್ತೆಯಾಯಿತಂತೆ. ಈಸ್ಟ್ ಇಂಡಿಯಾ ಕಂಪೆನಿ ಆಳ್ವಿಕೆ ಸಮಯದಲ್ಲಿ ಕಾಪ್ರಿ ಗುಲಾಮನಾಗಿ ಭಾರತಕ್ಕೆ ಬಂದಿದ್ದನಂತೆ. ಆತ ಬ್ರಿಟಿಷರಿಂದ ಎಲ್ಲಾ ರೀತಿಯ ಕಷ್ಟ, ತೊಂದರೆಗಳನ್ನು ಸಹಿಸಿ ಅವುಗಳನ್ನು ನಿವಾರಿಸಿ ಗೆದ್ದು ಜೀವಿಸಿದನು. ಆತ ಕ್ರೈಸ್ತ ಧರ್ಮದವನಾದರೂ ಕೂಡ ಎಲ್ಲಾ ಧರ್ಮವನ್ನು ಅನುಸರಿಸುತ್ತಿದ್ದನಂತೆ. ಅವನಲ್ಲಿ ದೈವೀ ಶಕ್ತಿಯಿತ್ತು ಎನ್ನುವ ಪ್ರತೀತಿಯಿದೆ.ಹಾಗಾಗಿ ಸುತ್ತಮುತ್ತನ ಜನರು ದೇವರಂತೆ ಆತನನ್ನು ಕಾಣುತ್ತಿದ್ದರಂತೆ. ಆತ ತನ್ನ ಭಕ್ತರಿಗೆ ದೇವಸ್ಥಾನವನ್ನು ಕಟ್ಟಿಸುವಂತೆ ಕೇಳಿಕೊಂಡರಂತೆ. ಅದರಂತೆ ದೇವಸ್ಥಾನ ಕಟ್ಟಿಸಲಾಯಿತು. ನಂತರ ಪ್ರತಿವರ್ಷ ಅಲ್ಲಿ ಜಾತ್ರೆ ನೆರವೇರಿಕೊಂಡು ಬರುತ್ತಿದೆ ಎನ್ನುತ್ತಾರೆ ದೇವಸ್ಥಾನದ ಆಡಳಿತ ಮಂಡಳಿ ಮುಖ್ಯಸ್ಥರು.

ಕಾಪ್ರಿ ಸತ್ತ ನಂತರ ಅವನ ಬೂದಿಯನ್ನು ಕಾಳಿ ನದಿಯಲ್ಲಿ ವಿಸರ್ಜಿಸಲಾಯಿತಂತೆ. ಕಾಪ್ರಿ ತೀರಿಹೋದ 15 ದಿನಗಳ ನಂತರ ಆತನನ್ನು ಹೋಲುವ ಒಂದು ಮೂರ್ತಿ ಅಲ್ಲಿ ದೊರಕಿತಂತೆ.ಹಾಗಾಗಿ ಭಕ್ತರು ಅಲ್ಲಿ ಕಾಪ್ರಿ ದೇವಾಲಯ ಕಟ್ಟಿಸಿದರಂತೆ. ಕಾಪ್ರಿಗೆ ತಂಬಾಕು ಮತ್ತು ಮದ್ಯ ಸೇವನೆಯ ಚಟವಿತ್ತಂತೆ.ಹಾಗಾಗಿ ಮದ್ಯ, ಸಿಗರೇಟುಗಳನ್ನು ದೇವರಿಗೆ ಅರ್ಪಿಸುತ್ತಾರೆ.

ಇಲ್ಲಿಗೆ ದೂರದೂರುಗಳಿಂದ ನೆರೆ ರಾಜ್ಯಗಳಾದ ಗೋವಾ, ಮಹಾರಾಷ್ಟ್ರಗಳಿಂದಲೂ ಭಕ್ತರು ಆಗಮಿಸಿ ತಮ್ಮ ಇಷ್ಟಾರ್ಥ ಸಿದ್ದಿಗೆ ಪ್ರಾರ್ಥಿಸಿಕೊಳ್ಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com