ಅಪಘಾತ
ರಾಜ್ಯ
ಸಹಾಯ ಬೇಡುತ್ತಲೇ ಮೃತಪಟ್ಟ ಅಪಘಾತ ಸಂತ್ರಸ್ತರು!
ಅಪಘಾತಕ್ಕೀಡಾದವರಿಗೆ ಸರಿಯಾದ ಸಹಾಯ ಸಿಗುತ್ತಿಲ್ಲಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಮೈಸೂರು: ರಾಜ್ಯ ಸರ್ಕಾರ ಅಪಘಾತ ಸಂತ್ರಸ್ತರಿಗಾಗಿ ಮುಖ್ಯಮಂತ್ರಿ ಹರೀಶ್ ಸಾಂತ್ವನ ಯೋಜನೆಯನ್ನು ಜಾರಿಗೆ ತಂದಿದೆ, " ಅಪಘಾತದಲ್ಲಿ ಸಿಲುಕಿಕೊಂಡವರಿಗೆ ಸಹಾಯ ಮಾಡಿ ಎಂದು ಖುದ್ದು ದೇಶದ ಸರ್ವೋಚ್ಛ ನ್ಯಾಯಾಲಯವೇ ಹೇಳಿದೆ. ಆದರೂ ಸಹ ಅಪಘಾತಕ್ಕೀಡಾದವರಿಗೆ ಸರಿಯಾದ ಸಹಾಯ ಸಿಗುತ್ತಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ಅಪಘಾತಕ್ಕೀಡಾಗಿದ್ದ ಕಿಶೋರ್ ಎಂಬ ವ್ಯಕ್ತಿಯನ್ನು ಆಸ್ಪತ್ರೆಯಿಂದ ಆಸ್ಪತ್ರೆಗೆ ಸುತ್ತಿಸಲಾಗಿತ್ತು, ಇಂಥದ್ದೇ ಘಟನೆ ಮೈಸೂರಿನಲ್ಲೂ ನಡೆದಿದೆ. ವ್ಯತ್ಯಾಸವೇನೆಂದರೆ ಅಪಘಾತಕ್ಕೀಡಾಗಿದ್ದ ಮೂವರೂ ಸಂತ್ರಸ್ತರು ಸಹಾಯ ಬೇಡುತ್ತಲೇ ಮೃತಪಟ್ಟಿದ್ದಾರೆ.
ಜೋಗನಹಳ್ಳಿಯಿಂದ ಹೆಚ್ ಡಿ ಕೋಟೆ ಗೆ ಬೈಕ್ ನಲ್ಲಿ ತೆರಳುತ್ತಿದ್ದ ಮೂವರು ಮೈಸೂರಿನ ಕೊಳಗಾಲ ಗ್ರಾಮದಲ್ಲಿ ಅಪಘಾತಕ್ಕೀಡಾದ್ದರು. ಮೂವರಲ್ಲಿ ಒಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಇನ್ನೋರ್ವ ದಾರಿಯಲ್ಲಿ ಹೋಗುವವರಿಂದ ಸಹಾಯಕ್ಕಾಗಿ ಮೊರೆಯಿಡುತ್ತಿದ್ದ. ತಕ್ಷಣವೇ ಸಹಾಯ ಮಾಡುವ ಬದಲು ಸಹಾಯಕ್ಕಾಗಿ ಮೊರೆಯಿಡುತ್ತಿರುವ ವಿಡಿಯೋ ಚಿತ್ರೀಕರಣ ಮಾಡಲಾಗಿದೆ. ಅಪಘಾತ ಸಂತ್ರಸ್ತನಿಗೆ ನೀರು ನೀಡಲು ಬಂದ ವ್ಯಕ್ತಿಯೊಬ್ಬ ಆತನ ಪೂರ್ವಾಪರಗಳನ್ನು ವಿಚಾರಿಸುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದ್ದು, ಈ ವಿಡಿಯೋ ವೈರಲ್ ಆಗಿದೆ.
ತೀವ್ರವಾಗಿ ಗಾಯಗೊಂಡಿದ್ದ ಇಬ್ಬರೂ ವ್ಯಕ್ತಿಗಳು ಆಸ್ಪತ್ರೆಯಲ್ಲಿ ನಿಧನರಾದರೆ, ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ರಮೇಶ್, ಮಹೇಶ್, ಮಂಜುನಾಥ್ ಎಂದು ಗುರುತಿಸಲಾಗಿದೆ. ವಿಡಿಯೋ ನೋಡಿದ ಮೃತರ ಸಂಬಂಧಿ ನವೀನ್, ಸಾರ್ವಜನಿಕರು ತಕ್ಷಣವೇ ಸಹಾಯಕ್ಕೆ ಬಾರದೇ ಚಿತ್ರೀಕರಣ ನಡೆಸಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಪಘಾತ ಸಂತ್ರಸ್ತರನ್ನು ಶೀಘ್ರವೇ ಆಸ್ಪತ್ರೆಗೆ ಕರೆತಂದಿದ್ದರೆ ಇಬ್ಬರನ್ನೂ ಉಳಿಸಬಹುದಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪಘಾತಕ್ಕೆ ಕಾರಣರಾದ ಬಸ್ ಚಾಲಕನನ್ನು ಬಂಧಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ