ಬೆಂಗಳೂರು: ರಾಜ್ಯಾದ್ಯಂತ ಎಸ್ಎಸ್ಎಲ್ ಸಿ ಪರೀಕ್ಷೆ ನಾಳೆ(ಬುಧವಾರ) ಆರಂಭವಾಗಲಿದ್ದು, ಪರೀಕ್ಷಾ ಸಮಯದಲ್ಲಿ ಮೊಬೈಲ್ ಫೋನ್ ತೆಗೆದುಕೊಂಡು ಹೋಗಲು ಬಿಡುವುದಿಲ್ಲ.
ಇಲ್ಲಿಯವರೆಗೆ ಮೊಬೈಲ್ ಫೋನ್ ನಿಷೇಧ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯವಾಗುತ್ತಿತ್ತು. ಆದರೆ ಈ ವರ್ಷದಿಂದ ಸಿಬ್ಬಂದಿಗಳು ಕೂಡ ಪರೀಕ್ಷಾ ಕೊಠಡಿಯೊಳಗೆ ಮೊಬೈಲ್ ಫೋನನ್ನು ತೆಗೆದುಕೊಂಡು ಹೋಗುವಂತಿಲ್ಲ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಆದೇಶ ತಂದಿದೆ. ಇದು ಪರೀಕ್ಷಾ ಕೊಠಡಿಗೆ ವಿದ್ಯಾರ್ಥಿಗಳಿಗೆ ನೀರು ಪೂರೈಸುವವರಿಂದ ಹಿಡಿದು ಕೊಠಡಿ ಮೇಲ್ವಿಚಾರಕರವರೆಗೆ ಎಲ್ಲರಿಗೂ ಅನ್ವಯವಾಗಲಿದೆ.
ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಕೆ.ಎಸ್.ಸತ್ಯಮೂರ್ತಿ, ಪರೀಕ್ಷೆ ನಡೆಯುವ ಕೇಂದ್ರದ ಮುಖ್ಯ ಮೇಲ್ವಿಚಾರಕರ ಬಳಿ ಮೊಬೈಲ್ ಫೋನುಗಳನ್ನು ಕೊಟ್ಟು ಪರೀಕ್ಷೆ ಕೊಠಡಿಯೊಳಗೆ ಪ್ರವೇಶಿಸಬೇಕು ಎಂದು ಹೇಳಿದರು.
ಪರೀಕ್ಷೆ ವೇಳೆ ಅವ್ಯವಹಾರಗಳನ್ನು ತಡೆಗಟ್ಟಲು ಮತ್ತು ಕೊಠಡಿಯಲ್ಲಿ ಮೇಲ್ವಿಚಾರಕರ ಮೊಬೈಲ್ ರಿಂಗಾದಾಗ ವಿದ್ಯಾರ್ಥಿಗಳ ಏಕಾಗ್ರತೆಗೆ ತೊಂದರೆಯಾಗದಿರಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
Advertisement