ಧಾರವಾಡ: ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿ) ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಧಾರವಾಡದ ವಾಲ್ಮಿ ಆವರಣದಲ್ಲಿ ಆರಂಭವಾಗಲಿದೆ.
ಮುಂಬೈ ಐಐಟಿಯ ಡೀನ್ ನಾರಾಯಣ್ ಪುಣೆಕರ್ ನೇತೃತ್ವದಲ್ಲಿ ಪ್ರೊಪ್ರೆಸರ್ ಗಳಾದ ಶಿವಪ್ರಸಾದ್, ಮಂಜುನಾಥ್, ಎಸ್.ವಿ ಪ್ರಭು, ಮಿಲಿಂದ್ ಗೋಕಲೆ ಮತ್ತು ಪ್ರದೀಪ್ ತಿರ್ಮರೆ ಅವರನ್ನೊಳಗೊಂಡ ಆರು ಮಂದಿ ತಂಡ ಧಾರವಾಡದ ವಾಲ್ಮಿ ಕಟ್ಟಡಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ವೇಳೆ ಜಿಲ್ಲಾ ಸಚಿವರು ವಿನಯ್ ಕುಲಕರ್ಣಿ, ಎಂಎಲ್ಎ ಅರವಿಂದ್ ಬೆಲ್ಲದ್, ಉಪ ಜಿಲ್ಲಾಧಿಕಾರಿ ರಾಜೇಂದ್ರ ಚೋಳನ್ ಹಾಗೂ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಬಳಿಕ ಮಾತನಾಡಿದ ಡೀನ್ ಪುಣೆಕರ್ ಜೂನ್ 10 ರಂದು ಜೆಇಇ ಪರೀಕ್ಷಾ ಫಲಿತಾಂಶಗಳು ಹೊರಬೀಳಲಿದ್ದು, ಐಐಟಿ ಸೀಟ್ ಗಳ ಲಭ್ಯತೆ ಕುರಿತಂತೆ ಅಧಿಕೃತ ಮಾಹಿತಿ ನೀಡಲಾಗುವುದು. ಇನ್ನು ಧಾರವಾಡ ಐಐಟಿಯಲ್ಲಿ ಎಲೆಟ್ರಿಕಲ್, ಮೆಕಾನಿಕಲ್ ಮತ್ತು ಕಂಪ್ಯೂಟರ್ ಸೈನ್ಸ್ ಕೋರ್ಸ್ ಗಳನ್ನು ನಡೆಸಲಾಗುವುದು. ಪ್ರತಿಯೊಂದು ವಿಭಾಗದಲ್ಲೂ 40 ವಿದ್ಯಾರ್ಥಿಗಳಿಗೆ ಸೀಟ್ ನೀಡಲಾಗುವುದು ಎಂದರು.
ಜೂನ್ ಮೊದಲ ವಾರದಲ್ಲಿ ಕಟ್ಟಡದ ದುರಸ್ತಿ ಕೆಲಸಗಳು ಮುಗಿಯಲಿದ್ದು, ಸಿಬ್ಬಂದಿ ಕ್ವಾಟರ್ಸ್ ಮತ್ತು ಹಾಸ್ಟೆಲ್ ವಸತಿ ನಿಲಯಗಳ ಸಿದ್ದತೆ ಕೈಗೊಳ್ಳಲಾಗುವುದು ಎಂದರು.
ಇನ್ನು ವಾಲ್ಮಿ ಕಟ್ಟಡ ದುರಸ್ಥಿ ಹಾಗೂ ನವೀಕರಣಕ್ಕಾಗಿ 3.05 ಕೋಟಿ ಬಿಡುಗಡೆ ಮಾಡಲಾಗಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಇನ್ನು ಜೂನ್ 10ರೊಳಗಾಗಿ ಎಲ್ಲಾ ಕಾಮಗಾರಿ ಮುಕ್ತಾಯಗೊಳ್ಳಲಿದೆ ಎಂದು ಜಿಲ್ಲಾ ಸಚಿವರು ಕುಲಕರ್ಣಿ ಹೇಳಿದ್ದಾರೆ.
Advertisement