ಕುಖ್ಯಾತ ಸರಗಳ್ಳ ಹೈದರ್ ಈಗ ಪೊಲೀಸರ ಅತಿಥಿ

25ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಬೇಕಾಗಿದ್ದ ಕುಖ್ಯಾತ ಸರಗಳ್ಳನನ್ನು ಬಂಧಿಸುವಲ್ಲಿ ಪೊಲೀಸರು...
ಹೈದರ್ ಸೈಯದ್ ನೂರ್ ಇರಾನಿ
ಹೈದರ್ ಸೈಯದ್ ನೂರ್ ಇರಾನಿ
Updated on

ಬೆಂಗಳೂರು: 25ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಬೇಕಾಗಿದ್ದ ಕುಖ್ಯಾತ ಸರಗಳ್ಳನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆತನ ಬಳಿಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಸರಗಳನ್ನು ವಶಪಡಿಸಿಕೊಂಡಿದ್ದಾರೆ.

ಪುಣೆಯ ಹೈದರ್ ಸೈಯದ್ ನೂರ್ ಇರಾನಿ ಎಂಬುವವನು ಬೆಂಗಳೂರಿನ ಜ್ಞಾನಭಾರತಿ, ಬಾಣಸವಾಡಿ, ಚಂದ್ರಾ ಲೇ ಔಟ್, ಪೀಣ್ಯ, ವಿಜಯನಗರ, ಯಶವಂತಪುರ ಮೊದಲಾದ ಕಡೆಗಳಲ್ಲಿ ಮಹಿಳೆಯರ ಕುತ್ತಿಗೆಯಿಂದ ಸರವನ್ನು ಕಿತ್ತು ಸಂಜೆಯ ಹೊತ್ತಿಗೆ ಪುಣೆಯ ರೈಲು ಹತ್ತಿ ಪರಾರಿಯಾಗುತ್ತಿದ್ದ. ಈತ ಇರಾನಿ ಗ್ಯಾಂಗ್ ನ ಸದಸ್ಯನಾಗಿರಬೇಕೆಂದು ಸಂದೇಹ ವ್ಯಕ್ತಪಡಿಸಲಾಗಿದ್ದು, ಮಹಿಳೆಯರನ್ನು ವಂಚಿಸಿ ಚಿನ್ನಾಭರಣಗಳನ್ನು ಕದಿಯುವುದರಲ್ಲಿ ಇರಾನಿ ಗ್ಯಾಂಗ್ ಪ್ರಸಿದ್ಧವಾಗಿದೆ. ಇರಾನಿ ಗ್ಯಾಂಗ್ ನ ಅನೇಕ ಸದಸ್ಯರು ಈಗಾಗಲೇ ಜೈಲಿನಲ್ಲಿದ್ದಾರೆ.

ತನಿಖೆ ಆರಂಭ: ನಿಖರ ಮಾಹಿತಿ ಪಡೆದ ಬೆಂಗಳೂರು ಕೇಂದ್ರ ಅಪರಾಧ ವಿಭಾಗದ ಪೊಲೀಸರು ಹೈದರ್ ನನ್ನು ಪತ್ತೆಹಚ್ಚಲು ವ್ಯಾಪಕ ಬಲೆ ಬೀಸಿದ್ದರು. ಆತನನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ. ಕದ್ದ ಸರಗಳನ್ನು ಎಲ್ಲಿಡುತ್ತಿದ್ದ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ವರ್ಷ ನಡೆದ ಸರಗಳ್ಳತನ ಪ್ರಕರಣಗಳಲ್ಲಿ ಹೈದರ್ ನ ಪಾತ್ರವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com