ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಎರಡನೇ ಹಂತದಲ್ಲಿ ಮತ್ತೆ 5 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಲು ಸರ್ಕಾರ ನಿರ್ಧರಿಸಿದ್ದು, ಡಿಸೆಂಬರ್ ತಿಂಗಳಲ್ಲಿ ಅರ್ಜಿ ಆಹ್ವಾನಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೊದಲ ಹಂತದಲ್ಲಿ ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನ ಹಂಚಿಕೆಯಾದವರಿಗೆ ಗೃಹ ಕಚೇರಿ ಕೃಷ್ಣಾದಲ್ಲಿ ಬುಧವಾರ ಕಂಪ್ಯೂಟರ್ ರ್ಯಾಂಡಮೈಸೇಷನ್ ವಿಧಾನದ ಮೂಲಕ ನಿವೇಶನ ಸಂಖ್ಯೆ ನಿಗದಿಪಡಿಸಿದ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿದರು.
ಈ ಮೊದಲು ನಿವೇಶನ ಹಂಚಿಕೆ ಪ್ರಕ್ರಿಯೆ ಲಾಟರಿ ಮೂಲಕ ನಡೆಯುತ್ತಿತ್ತು, ಒಂದೊಂದು ಬಾರಿ ಒಂದೊಂದೇ ಚೀಟಿ ಆರಿಸಬೇಕಿತ್ತು, ಮತ್ತೆ ಎಲ್ಲವನ್ನು ಒಟ್ಟಿಗೆ ಹಾಕಿ ಪುನಃ ಲಾಟರಿ ತೆಗೆಯಬೇಕಿತ್ತು. ನಿವೇಶನ ಸಂಖ್ಯೆ ನಿಗದಿ ಪಡಿಸುವ ಪ್ರಕ್ರಿಯೆ ಪಾರದರ್ಶಕವಾಗಿ ನಡೆಸುವ ಉದ್ದೇಶದಿಂದ ನಾವು ಕಂಪ್ಯೂಟರ್ ರ್ಯಾಂಡಮೈಸೇಷನ್ ವಿಧಾನ ಅನುಸರಿಸಿದ್ದೇವೆ.
ನಿವೇಶನದಾರರಿಗೆ ಯಾವ ಸಂಖ್ಯೆಯ ನಿವೇಶನ ಸಿಗಲಿದೆ ಎಂಬುದನ್ನು ಕಂಪ್ಯೂಟರ್ ಆಯ್ಕೆ ಮಾಡುತ್ತದೆ. ಮಾನವ ಹಸ್ತಕ್ಷೇಪ ಇಲ್ಲದ ಪಾರದರ್ಶಕ ವ್ಯವಸ್ಥೆ ಇದು. ಇದೇ ಮೊದಲ ಬಾರಿಗೆ ನಿವೇಶನ ಸಂಖ್ಯೆ ನಿಗದಿಗೆ ಈ ವಿಧಾನ ಬಳಸಲಾಗಿದೆ
.
ಸಿಎಂ ಸಿದ್ದರಾಮಯ್ಯ 4 ಬಾರಿ ಮೌಸ್ ಕ್ಲಿಕ್ ಮಾಡಿದರು, 20*30, 30*40, 60*40, 50*80 ನಾಲ್ಕು ಅಳತೆಯ ನಿವೇಶನ ಹಂಚಿಕೆ ಮಾಡಲು ಸಿಎಂ 4 ಸಲ ಕಂಪ್ಯೂಟರ್ ಮೌಸ್ ಕ್ಲಿಕ್ ಮಾಡಿ 5 ಸಾವಿರ ಮಂದಿಗೆ ನಿವೇಶನ ಹಂಚಿಕೆ ಮಾಡಿದರು. ಕೇವಲ 10 ನಿಮಿಷಗಳಲ್ಲಿ ನಿವೇಶನ ಹಂಚಿಕೆ ಪ್ರಕ್ರಿಯೆ ಮುಗಿಯಿತು.
Advertisement