ಬೆಂಗಳೂರು: ಕೇಂದ್ರ ಸರ್ಕಾರ 500 ರೂ ಹಾಗೂ 1 ಸಾವಿರ ರೂ ಮುಖ ಬೆಲೆಯ ನೋಟುಗಳಿಗೆ ನಿಷೇಧ ಹೇರಿದ ಮೇಲೆ ದೇವಾಸ್ಥಾನದ ಹುಂಡಿಗಳಲ್ಲೂ ಚಿಲ್ಲರೆಗೆ ಅಭಾವ ತಲೆ ದೋರಿದೆ.
500 ರೂ ನೋಟು ಕೊಡುವ ಭಕ್ತಾದಿಗಳು ಚಿಲ್ಲರೆಗಾಗಿ ಪೂಜಾರಿಗಳ ಮೊರೆ ಹೋಗಿದ್ದಾರೆ. ಬುಧವಾರ ದೇವಾಸ್ಥಾನದ ಹುಂಡಿ ತೂಕ ಕಡಿಮೆಯಾಗಿದೆ. ರಾತ್ರಿ ಹುಂಡಿ ತೆರೆದಾಗ ಅದರಲ್ಲಿ ಚಿಲ್ಲರೆ ಹಣಕ್ಕಿಂತ ನೋಟುಗಳೇ ಹೆಚ್ಚಾಗಿದ್ದವು ಎಂದು, ಅದರಲ್ಲಿ 500 ಮತ್ತು 1000 ರೂ ನೋಟುಗಳೇ ಹೆಚ್ಚಾಗಿದ್ದವು. ಪ್ರತಿದಿನ ಸುಮಾರು 2.500 ರೂ ಹಣ ಮಾತ್ರ ಸಂಗ್ರಹವಾಗುತ್ತಿತ್ತು. ಆದರೆ ಬುಧವಾರ 6 ಸಾವಿರ ರೂ ಹಣ ಸಂಗ್ರಹವಾಗಿದೆ ಎಂದು ರಾಜಾಜಿನಗರದಲ್ಲಿರುವ ಗಣಪತಿ ದೇವಾಲಯ ಪೂಜಾರಿ ಲಕ್ಷ್ಮಿ ನಾರಾಯಣಶರ್ಮ ಹೇಳುತ್ತಾರೆ.
ಜನ ನಾಚಿಕೆಯಿಲ್ಲದೇ ಬಂದು, 500 ರೂ ನೋಟು ಕೊಟ್ಟು 400 ರೂ ವಾಪಸ್ ಕೇಳುತ್ತಾರೆ. ನಮಗೆ ನೂರು ರೂ ನೀಡಿ ಒಳ್ಳೆಯದನ್ನು ಮಾಡುತ್ತಿರುವುದಾಗಿ ಅವರ ಭಾವನೆ ಇರುತ್ತದೆ. ಈ ಮೊದಲಿಗೆ ಕೆಲ ಅಂಗಡಿಯವರು ಬಂದು ಚಿಲ್ಲರೆ ಹಣ ತೆಗೆದುಕೊಂಡು ಹೋಗುತ್ತಿದ್ದರು ಎಂದು ಬೆಂಗಳೂರು ದಕ್ಷಿಣದಲ್ಲಿರುವ ರಾಘವೇಂದ್ರ ಸ್ವಾಮಿ ಮಠದ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.
ಶೀಘ್ರವೇ ಮುಜಾರಾಯಿ ಇಲಾಖೆ ರಾಜ್ಯದ 34,500 ದೇವಾಲಯಗಳಿಗೂ 500 ಹಾಗೂ 1000 ರುಪಾಯಿ ನೋಟುಗಳನ್ನು ಸ್ವೀಕರಿಸಬಾರದೆಂದು ನೋಟಿಸ್ ನೀಡಲಿದೆ. ಈಗ ಸದ್ಯ ಎಲ್ಲಾ ದೇವಾಲಯಗಳಲ್ಲೂ ಭಕ್ತರು 500 ಮತ್ತು 1000 ರು ನೋಟುಗಳನ್ನು ನೀಡುತ್ತಿದ್ದಾರೆ. ಕೆಲವರು ಹುಂಡಿಗಳಿಗೆ ಹಾಕುತ್ತಿದ್ದಾರೆ.ಹೀಗಾಗಿ ದೇವಾಲಯದ ಹುಂಡಿಯಲ್ಲಿರುವ ಹಣವನ್ನು ಶೀಘ್ರವೇ ಬ್ಯಾಂಕ್ ನಲ್ಲಿ ಬದಲಾವಣೆ ಮಾಡಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬರುವ ಭಕ್ತರಿಗೆ ಹಳೇಯ 500 ರು ನೋಟು ಸ್ವೀಕರಿಸುವುದಿಲ್ಲ ಎಂದು ಎಲ್ಲಾ ದೇವಾಲಯಗಳಲ್ಲೂ ಸೂಚನೆ ನೀಡಲಾಗುವುದು. ಒಂದು ವೇಳೆ ಭಕ್ತರು ಹುಂಡಿಯಲ್ಲಿ ಹಳೇಯ ನೋಟುಗಳನ್ನು ಹಾಕಿದರೇ ಏನು ಮಾಡಲಾಗದು ಎಂದು ಹೇಳಿದ್ದಾರೆ.
ಆದರೆ ಎಲ್ಲಾ ದೇವಾಲಯಗಳಲ್ಲೂ ಈ ಪರಿಸ್ಥಿತಿ ಇಲ್ಲ. ಜನರಿಗೆ ದೇವರ ಮೇಲೆ ಭಯವಿದ್ದು, ತಾವು ಮಾಡುತ್ತಿರುವುದು ಪಾಪದ ಕೆಲಸ ಎಂದು ನಂಬಿ, ನಮ್ಮ ದೇವಾಲಯದಲ್ಲಿ ಹುಂಡಿಗೆ ಹಣ ಹಾಕಿಲ್ಲ ಎಂದು ಗಾಳಿ ಆಂಜನೇಯ ಸ್ವಾಮಿ ದೇವಾಸ್ಥಾನದ ಅರ್ಚಕ ತಿಳಿಸಿದ್ದಾರೆ.
Advertisement