ಬಳ್ಳಾರಿ: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕೇಳಿರುವ ಎಲ್ಲಾ ಪ್ರಶ್ನೆಗಳಿಗೆ ನಮ್ಮ ಬಳಿ ಉತ್ತರ ಇದೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಜಿ ಹಿರಿಯ ಸಹೋದರ ಸೋಮಶೇಖರ ರೆಡ್ಡಿ ಹೇಳಿದ್ದಾರೆ.
ಜನಾರ್ದನ ರೆಡ್ಡಿ ಪುತ್ರಿ ಅದ್ದೂರಿ ವಿವಾಹದ ನಂತರ ಬಳ್ಳಾರಿಯ ರೆಡ್ಡಿ ಮನೆ ಹಾಗೂ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಲಿ ನಡೆಸಿ ಪರಿಶೀಲನೆ ನಡೆಸಿದ್ದರು.
ತೆರಿಗೆ ಇಲಾಖೆ ಅಧಿಕಾರಿಗಳು ಕೇಳಿರುವ ಎಲ್ಲಾ 16 ಪ್ರಶ್ನೆಗಳಿಗೂ ನವೆಂಬರ್ 25ರೊಳಗೆ ತಮ್ಮ ಲೆಕ್ಕಪರಿಶೋಧಕ ಉತ್ತರಿಸಿಲಿದ್ದಾರೆ ಎಂದು ಹೇಳಿದ್ದಾರೆ.
ಮದುವೆಗೂ ಮುನ್ನ ಆದ ಖರ್ಚು ಎಷ್ಟು? ಮದುವೆ ವೇಳೆ ಹಾಗೂ ಮದುವೆ ನಂತರದ ಖರ್ಚು ಎಷ್ಟು? ಮದುವೆ ಸಮಾರಂಭ ಆಯೋಜಿಸಿದ್ದು ಎಲ್ಲಿ? ವಿವಾಹಕ್ಕೆ ಹಾಜರಾದ ಒಟ್ಟು ಅತಿಥಿಗಳ ಸಂಖ್ಯೆ ಎಷ್ಟು? ಮದುವೆಗೆ ಖರ್ಚು ಮಾಡಿದ ಹಣದ ಮೂಲ ಯಾವುದು? ಕಾರ್ಯಕ್ರಮ ವ್ಯವಸ್ಥಾಪಕರ ಪೂರ್ಣ ವಿವರ ಕೊಡಿ, ಹಣ ಸಂದಾಯ ಮಾಡಿದ್ದು ಹೇಗೆ? ಮನರಂಜನೆ ಕಾರ್ಯಕ್ರಮ ನಡೆಸಿಕೊಟ್ಟಿದ್ದಕ್ಕಾಗಿ ಯಾರಿಗಾದರೂ ಹಣ ಪಾವತಿಸಲಾಗಿದೆಯೇ? ಪಾವತಿಸಿದರೆ ಅವರ ವಿವರ ಹಾಗೂ ಎಷ್ಟು ಹಣ ಖರ್ಚಾಯಿತು ಎನ್ನುವ ಮಾಹಿತಿ ಕೊಡಿ ಎಂದು ತಿಳಿಸಲಾಗಿದೆ.
ಊಟ, ಪೆಂಡಾಲ್, ಹೂವಿನ ಅಲಂಕಾರ, ಧ್ವನಿ ಮತ್ತು ಬೆಳಕು, ಮನರಂಜನೆ ಮತ್ತು ಸಂಗೀತ, ಸಾರಿಗೆ, ವಸತಿ ವ್ಯವಸ್ಥೆ, ಭದ್ರತೆ, ಮದುವೆ ನಡೆದ ಸ್ಥಳ, ಛಾಯಾಚಿತ್ರ ಮತ್ತು ವಿಡಿಯೊ, ಧಾರ್ಮಿಕ ಕಾರ್ಯಕ್ರಮ, ಪುರೋಹಿತ–ಪೂಜಾರಿಗೆ ನೀಡಿದ ಹಣ ಮತ್ತು ಇತರ ಖರ್ಚು–ವೆಚ್ಚ ಎಷ್ಟು, ಮದುವೆ ಆಹ್ವಾನ ಪತ್ರಿಕೆಗಳ ಸಂಖ್ಯೆ, ಎಷ್ಟು ಪ್ರಕಾರ, ಅದನ್ನು ಮುದ್ರಿಸಿದವರು ಯಾರು, ಅವರ ಪೂರ್ಣ ಮಾಹಿತಿ, ಅವರಿಗೆ ಪಾವತಿಸಿರುವ ಒಟ್ಟು ಹಣ ಮತ್ತು ಅವರಿಗೆ ಯಾವ ರೀತಿ ಹಣ ಪಾವತಿಸಲಾಗಿದೆ ಎನ್ನುವ ಮಾಹಿತಿ ನೀಡಿ ಎಂದು ಕೇಳಿದೆ.
ನಿಮ್ಮ ಹಾಗೂ ಕುಟುಂಬ ಸದಸ್ಯರಿಗಾಗಿ ಖರೀದಿಸಿದ ಚಿನ್ನಾಭರಣ, ವಸ್ತ್ರ ಸೇರಿದಂತೆ ಇತರ ಬೆಲೆಬಾಳುವ ವಸ್ತು ಖರೀದಿಸಿದ್ದು ಎಷ್ಟು? ಎಲ್ಲಿ? ಅದಕ್ಕೆ ಖರ್ಚಾದ ಒಟ್ಟು ಹಣವೆಷ್ಟು? ಹಣ ಪಾವತಿಸಿದ ಎಲ್ಲ ಬ್ಯಾಂಕ್ ಖಾತೆಗಳು, ಕ್ರೆಡಿಟ್, ಡೆಬಿಟ್ ಕಾರ್ಡ್ಗಳ ಮಾಹಿತಿ ಕೊಡಿ, ಮದುವೆ ವೇಳೆ ಕೊಟ್ಟ ಉಡುಗೊರೆಗಳ ವಿವರ ಕಾರ್ಯಕ್ರಮ ಸಂಯೋಜಿಸಿದವರ ಪೂರ್ಣ ವಿವರ, ಸೇವಾ ಪೂರೈಕೆದಾರರು ನೀಡಿದ ಖರ್ಚಿನ ಅಂದಾಜು ಪ್ರತಿ ವಿವರವನ್ನು ನವೆಂಬರ್ 26 ರೊಳಗೆ ಸಲ್ಲಿಸುವಂತೆ ತೆರಿಗೆ ಇಲಾಖೆ ಆಯುಕ್ತರು ತಿಳಿಸಿದ್ದಾರೆ.
Advertisement