ಮೈಸೂರು: ಹಲವು ದಿನಗಳ ಬರದ ನಂತರ ಜಂಬೂಸವಾರಿಯಲ್ಲಿ ವರುಣನ ಸಿಂಚನ

ಕಳೆದ ಹಲವು ತಿಂಗಳಿಂದ ಮಳೆಯಿಲ್ಲದೇ ಕಂಗಲಾಗಿದ್ದ ಮೈಸೂರಿನಲ್ಲಿ ಜಂಬೂಸವಾರಿ ವೇಳೆ ಸುರಿದ ಮಳೆ ಸಂತಸ ತಂದಿದೆ....
ಜಾನಪದ ಕಲಾತಂಡದಿಂದ ಪ್ರದರ್ಶನ
ಜಾನಪದ ಕಲಾತಂಡದಿಂದ ಪ್ರದರ್ಶನ

ಮೈಸೂರು: ಕಳೆದ ಹಲವು ತಿಂಗಳಿಂದ ಮಳೆಯಿಲ್ಲದೇ ಕಂಗಲಾಗಿದ್ದ ಮೈಸೂರಿನಲ್ಲಿ ಜಂಬೂಸವಾರಿ ವೇಳೆ ಸುರಿದ ಮಳೆ ಸಂತಸ ತಂದಿದೆ.

ಸುಮಾರು ಒಂದು ತಾಸು ಸುರಿದ ಮಳೆಯಿಂದಾಗಿ ಪ್ರವಾಸಿಗರು ತಾವು ಕುಳಿತಿದ್ದ ಕುರ್ಚಿಗಳನ್ನೇ ಕೊಡೆಯಂತೆ ಹಿಡಿದು ಮಳೆಯಿಂದ ನೆನೆಯುವುದನ್ನು ಸ್ವಲ್ಪ ತಪ್ಪಿಸಿಕೊಂಡರು.  ಸಾವಿರಾರು ಪ್ರವಾಸಿಗರು ಹಾಗೂ ಕಲಾವಿದರು ಅರಮನೆಯಯೊಳಗೆ ಹೋಗಿ ಮಳೆಯಿಂದ ರಕ್ಷಿಸಿಸಕೊಂಡರು. ಇದ್ದಕ್ಕಿದ್ದಂತೆ ಸುರಿದ ಮಳೆ ಲಕ್ಷಾಂತರ ಪ್ರವಾಸಿಗರನ್ನು ಆಶ್ಚರ್ಯ ಚಕಿತಗೊಳಿಸಿತ್ತು.

ಐರಾವತ ಬಸ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವರ ಜತೆ ಬಂದು ಮಧ್ಯಾಹ್ನ 2.15ರ ಮಕರ ಲಗ್ನದಲ್ಲಿ ಅಂಬಾವಿಲಾಸ ಅರಮನೆಯ ಬಲರಾಮ ದ್ವಾರದ ಬಳಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು ಸತತ ಎರಡು ವರ್ಷಗಳಿಂದ ಮಳೆಯಿಲ್ಲದೇ ರಾಜ್ಯ ಬರಗಾಲದಿಂದ ತತ್ತರಿಸಿದೆ. ಹಾಗಾಗಿ 110 ತಾಲೂಕುಗಳನ್ನು ಬರಪೀಡತ ಎಂದು ಘೋಷಿಸಲಾಗಿದೆ. ತಾಯಿ ಚಾಮುಂಡೇಶ್ವರಿ ಆಶೀರ್ವಾದದಿಂದಾಗಿ ಈ ಬಾರಿ ಉತ್ತಮ ಮಳೆಯಾಗಲಿ ಎಂದು ಪ್ರಾರ್ಥಿಸಿದರು.ಸಿಎಂ ಸಿದ್ದರಾಮಯ್ಯ ಜೊತೆ, ಎಚ್ ಸಿ ಮಹಾದೇವಪ್ಪ, ಮಹಾದೇವ ಪ್ರಸಾದ್ ಸೇರಿದಂತೆ ಹಲವು ಸಂಪುಟ ಸಹೋದ್ಯೋಗಿಗಳು ಜಂಬೂಸವಾರಿ ವೇಳೆ ಪಾಲ್ಗೊಂಡಿದ್ದರು. ಚಿನ್ನದ ಅಂಬಾರಿಯಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಸಂಜೆ 5.05ಕ್ಕೆ ಸಿದ್ದರಾಮಯ್ಯ ಪುಷ್ಪಾರ್ಚನೆ ಮಾಡುತ್ತಿದ್ದಂತೆ ಮತ್ತೊಮ್ಮೆ ಜಯಘೋಷ ಮೊಳಗಿತು.

ವಿವಿಧ ಜಿಲ್ಲೆಗಳ ಸ್ತಬ್ಧ ಚಿತ್ರಗಳು ಸೇರಿದಂತೆ ಒಟ್ಟು 42 ಸ್ತಬ್ಧ ಚಿತ್ರಗಳು ಜನಾಕರ್ಷಣೆಯ ಜಂಬೂಸವಾರಿಗೆ ಮೆರುಗು ನೀಡಿದವು. ನೆಲ-ಜಲ, ಕಲೆ, ಸಂಸ್ಕೃತಿ, ಸಾಹಿತ್ಯ, ರಾಜಮನೆತನದ ಮಾಹಿತಿ ಬಿಂಬಿಸುವ ಸ್ತಬ್ಧ ಚಿತ್ರಗಳು ಅನಾವರಣಗೊಂಡವು. ಜನಪದ ಕಲಾ ತಂಡಗಳ ವೈಭವ ದಸರಾ ಮೆರವಣಿಗೆಯನ್ನು ರಂಗೇರಿಸಿತು.

ಜನಾಕರ್ಷಣೆ ಮೆರವಣಿಗೆಯು ಬರದ ಬೇಗೆ ಹಾಗೂ ಕಾವೇರಿ ಬಿಕ್ಕಟ್ಟನ್ನು ತಾತ್ಕಾಲಿಕವಾಗಿ ತೆರೆಮರೆಗೆ ಸರಿಸಿತು. ಇದರೊಂದಿಗೆ 11 ದಿನಗಳ ವಿಶ್ವವಿಖ್ಯಾತ ದಸರಾ ಮಹೋತ್ಸವದ ವೈಭವಕ್ಕೆ ತೆರೆಬಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com