ಮಂಡ್ಯ: ನೀರಿಗಾಗಿ ಕೆ.ಆರ್.ಪೇಟೆ ಜೆಡಿಎಸ್ ಶಾಸಕ ನಾರಾಯಣ ಗೌಡ ಅವರು ಸರ್ಕಾರಿ ಅಧಿಕಾರಿಯೊಬ್ಬರನ್ನು ಎಳೆದಾಡಿ, ಅವರ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಬುಧವಾರ ನಡೆದಿದೆ.
ರೈತರ ಬೆಳೆಗೆ ಅಗತ್ಯ ನೀರು ಬಿಡದ ಹಿನ್ನಲೆಯಲ್ಲಿ ನಾರಾಯಣ ಗೌಡ ಅವರು ಇಂದು ತಮ್ಮ ಬೆಂಬಲಿಗರೊಂದಿಗೆ ಹೇಮಾವತಿ ಡ್ಯಾಂ ಯೋಜನೆಯ ಇಂಜಿನಿಯರ್ ಕಚೇರಿಗೆ ತೆರಳಿ, ಇಂಜಿನಿಯರ್ ನಾರಾಯಣ್ ಅವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಟೇಬಲ್ ಮೇಲಿದ್ದ ಪುಸ್ತಕಗಳನ್ನು ಚೆಲ್ಲಾಡಿದ್ದಾರೆ.
ನೀರು ಬಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಇಂಜಿನಿಯರ್ ಜೊತೆ ಚರ್ಚಿಸುತ್ತಿದ್ದ ನಾರಾಯಣಗೌಡ ಅವರು ಏಕಾಏಕಿ ಅವರ ಕತ್ತು ಹಿಡಿದು ಎಳೆದಿದ್ದಾರೆ. ಆ ವೇಳೆ ಬೆಂಬಲಿಗರು ತಡೆದಿಲ್ಲವಾದರೆ ಹಲ್ಲೆಯನ್ನೇ ಮಾಡಿ ಬಿಡುತ್ತಿದ್ದರು ಎನ್ನಲಾಗಿದೆ.
ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ನಾರಾಯಣಗೌಡ ಅವರು, ನಾನು ಇಂಜಿನಿಯರ್ ಮೇಲೆ ಹಲ್ಲೆ ನಡೆಸಿಲ್ಲ. ರೈತರ ಬೆಳೆಗಳಿಗೆ ನೀರು ಬಿಡದೇ ಇರುವಾಗ ರೈತರು ನನ್ನನ್ನು ಪ್ರಶ್ನಿಸಿದ್ದರು. ರೈತರ ಪರವಾಗಿ ಮಾತನಾಡಲು ನಾನು ಇಂಜಿನಿಯರ್ ಕಚೇರಿಗೆ ಹೋಗಿದ್ದೆ. ನೀವೇ ನನ್ನೊಂದಿಗೆ ಬನ್ನಿ, ರೈತರ ಕಷ್ಟ ನೋಡಿ ಎಂದು ನಾನು ಅವರನ್ನು ಕೈ ಹಿಡಿದು ನನ್ನೊಂದಿಗೆ ಕರೆತರಲು ಯತ್ನಿಸಿದ್ದೇನೆ ಅಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ.