ಬೆಂಗಳೂರು: ಉಕ್ಕಿನ ಸೇತುವೆ ವಿವಾದ ರಾಜಭವನದ ಅಂಗಳ ತಲುಪಿದೆ. ಬಸವೇಶ್ವರ ವೃತ್ತದಿಂದ ಹೆಬ್ಬಾಳದವರೆಗೆ ಉಕ್ಕಿನ ಸೇತುವೆ ನಿರ್ಮಿಸಲು ಹೊರಟಿರುವ ಸರ್ಕಾರ ಕಾನೂನಿನ ಅನೇಕ ಅಂಶಗಳನ್ನು ಗಾಳಿಗೆ ತೂರಿದೆ. ಈ ಯೋಜನೆಯನ್ನು ತಡೆಯಲು ಮಧ್ಯಪ್ರವೇಶ ಮಾಡಬೇಕು ಎಂದು ಸಿಟಿಜನ್ಸ್ ಫಾರ್ ಬೆಂಗಳೂರು ಸಂಘಟನೆಯ ನಿಯೋಗವು ರಾಜ್ಯಪಾಲ ವಜುಬಾಯಿ ವಾಲಾ ಅವರನ್ನು ಒತ್ತಾಯಿಸಿದೆ.
ನಿಯೋಗದಲ್ಲಿ ಸಂಘಟನೆಯ ಪ್ರಮುಖರಾದ ಪ್ರಕಾಶ ಬೆಳವಾಡಿ, ವಾಸ್ತುಶಿಲ್ಪಿ ನರೇಶ ನರಸಿಂಹನ್, ತಾರಾ ಕೃಷ್ಣಸ್ವಾಮಿ, ಪ್ರಿಯಾ ಚೆಟ್ಟಿ ರಾಜಗೋಪಾಲ್, ಶ್ರೀಧರ ಪಬ್ಬಿಸೆಟ್ಟಿ, ಲಿಯೊ ಎಫ್. ಸಲ್ಡಾನ ಮಂಗಳವಾರ ರಾಜ್ಯಪಾಲರನ್ನು ಭೇಟಿ ಮಾಡಿ ಯೋಜನೆಯಿಂದ ಉಂಟಾಗುವ ಅನನುಕೂಲಗಳ ಬಗ್ಗೆ ಗಮನ ಸೆಳೆದರು.
ನಗರದಲ್ಲಿ ಯಾವುದೇ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ರೂಪಿಸುವ ಮುನ್ನ ಮಹಾನಗರ ಯೋಜನಾ ಸಮಿತಿಯ (ಎಂಪಿಸಿ) ಒಪ್ಪಿಗೆ ಪಡೆಯುವುದು ಮುಖ್ಯ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಈ ಯೋಜನೆಯ ವಿಸ್ತೃತ ಯೋಜನಾ ವರದಿ ಸಿದ್ದಪಡಿಸುವ ಮುನ್ನ ಎಂಪಿಸಿಯ ಸಲಹೆ ಪಡೆದಿಲ್ಲ ಎಂದು ದೂರಿದ್ದಾರೆ.
ಯೋಜನೆ ರೂಪಿಸುವಾಗ ಕರ್ನಾಟಕ ನಗರ ಮತ್ತು ಗ್ರಾಮ ಯೋಜನಾ (ಕೆಟಿಸಿಪಿ) ಕಾಯ್ದೆಯ ಅಂಶಗಳನ್ನು ಗಾಳಿಗೆ ತೂರಲಾಗಿದೆ. 812 ಮರಗಳನ್ನು ಕಡಿಯುವ ಬಗ್ಗೆಯೂ ಸಾರ್ವಜನಿಕರ ಅಭಿಪ್ರಾಯ ಪಡೆದಿಲ್ಲ ಎಂದು ನಿಯೋಗದ ಸದಸ್ಯರು ರಾಜ್ಯಪಾಲರಿಗೆ ತಿಳಿಸಿದ್ದಾರೆ.
Advertisement
Advertisement