ಬೆಂಗಳೂರು: ಒಕ್ಕಲಿಗ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದ್ದ ತಮ್ಮ ಹೇಳಿಕೆ ಬಗ್ಗೆ ರಾಜರಾಜೇಶ್ವರಿನಗರ ಶಾಸಕ ಮುನಿರತ್ನ ಸ್ಪಷ್ಟನೆ ನೀಡಿದ್ದು, ಆದಿಚುಂಚನಗಿರಿ ಶ್ರೀಗಳಲ್ಲಿ ನಾನು ರಾಜಕಾರಣಿಗಳಿಗೆ ಮಾರ್ಗದರ್ಶನ ನೀಡಬೇಕೆಂದು ಕೇಳಿಕೊಂಡಿದ್ದೆ ಎಂದು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುನಿರತ್ನ, ಶ್ರೀಗಂಧದ ಕಾವಲ್ ನಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಿದ್ದ ನಾನು ಕಾರ್ಯಕ್ರಮದ ಭಾಷಣದಲ್ಲಿ ಹಲವು ಹೇಳಿಕೆ ನೀಡಿದ್ದೆ. ಈ ಪೈಕಿ ಹಗರಣಗಳಿಂದ ಜನರು ಜನಪ್ರತಿನಿಧಿಗಳನ್ನು ನಂಬದ ಸ್ಥಿತಿ ಉಂಟಾಗಿದೆ. ಆದ್ದರಿಂದ ಮಾರ್ಗದರ್ಶನ ನೀಡಬೇಕು ಎಂದು ನಿರ್ಮಲಾನಂದನಾಥ ಶ್ರೀಗಳಲ್ಲಿ ಕೇಳಿಕೊಂಡಿದ್ದೆ ಎಂದು ತಿಳಿಸಿದ್ದಾರೆ.
ರಾಜರ ಕಾಲದಲ್ಲೂ ಸಂತರು ಮಾರ್ಗದರ್ಶನ ನೀಡುತ್ತಿದ್ದರು. ಈ ಹಿನ್ನೆಲೆಯಲ್ಲಿ ನಿಮ್ಮ ಮಾರ್ಗದರ್ಶನ ಬೇಕು ಎಂದಿದ್ದಾಗಿ ಮುನಿರತ್ನ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. "ನಿರ್ಮಲಾನಂದನಾಥ ಸ್ವಾಮೀಜಿಗಳನ್ನು ಭೇಟಿ ಮಾಡಿ ನನ್ನ ಹೇಳಿಕೆ ಬಗ್ಗೆ ವಿವರಣೆ ನೀಡಿ ಕ್ಷಮೆ ಯಾಚಿಸಿದ್ದೇನೆ, ಶ್ರೀಗಳ ವಿರುದ್ಧ ಯಾರು ಸಹ ಮಾತನಾಡಬಾರದು, ನಾನು ಅಂತಹ ಪಾಪದ ಕೆಲಸ ಮಾಡುವುದಿಲ್ಲ" ಎಂದು ಮುನಿರತ್ನ ತಿಳಿಸಿದ್ದಾರೆ.
ಅ.28 ರಂದು ಬೆಂಗಳೂರಿನ ಶ್ರೀಗಂಧದ ಕಾವಲ್ ನಲ್ಲಿ ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದ ಶಾಸಕ ಮುನಿರತ್ನ, ಆದಿಚುಂಚನಗಿರಿಯ ಶ್ರೀಗಳ ಸಮ್ಮುಖದಲ್ಲಿ "ಸ್ವಾಮೀಜಿಗಳೇ ರಾಜ್ಯ ಆಳಲಿ ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆ ಬಗ್ಗೆ ಒಕ್ಕಲಿಗ ಸಮುದಾಯ ಮುಖಂಡರು ಅಸಮಾಧಾನ ವ್ಯಕ್ತಪಡಿಸಿ ನ.2 ರಂದು ಹೇಳಿಕೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದರು.
Advertisement