ಬೆಂಗಳೂರು: ರಾಜ ಕಾಲುವೆ ಒತ್ತುವರಿ ಮಾಡಿಕೊಂಡು ಮನೆ ನಿರ್ಮಾಣ ಮಾಡಿರುವ ಆರೋಪದ ಮೇಲೆ ರಾಜರಾಜೇಶ್ವರಿ ನಗರದಲ್ಲಿರುವ ನಟ ದರ್ಶನ್ ಅವರ ಮನೆಯನ್ನು ವಶಕ್ಕೆ ತೆಗೆದುಕೊಳ್ಳಲು ಜಿಲ್ಲಾಡಳಿತ ನಿರ್ಧರಿಸಿದೆ ಎಂದು ಮಾಧ್ಯಮದಲ್ಲಿ ವರದಿಯಾಗಿದೆ.
ರಾಜರಾಜೇಶ್ವರಿನಗರದ ಐಡಿಯಲ್ ಹೋಮ್ಸ್ ಬಡಾವಣೆಯಲ್ಲಿ ನಟ ದರ್ಶನ್ ಅವರ ಮನೆ ಹಾಗೂ ಶಾಮನೂರು ಶಿವಶಂಕರಪ್ಪ ಆಸ್ಪತ್ರೆ ಸೇರಿದಂತೆ 7 ಎಕರೆ, 31 ಗುಂಟೆ ಒತ್ತುವರಿ ಪ್ರದೇಶದಲ್ಲಿರುವ ಎಲ್ಲ ಕಟ್ಟಡಗಳನ್ನು ವಶಕ್ಕೆ ಪಡೆಯಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ..
ಐಡಿಯಲ್ ಹೋಮ್ಸ್ ಬಡಾವಣೆಯಲ್ಲಿ ಒಟ್ಟಾರೆ 194 ಕಟ್ಟಡ, ಮನೆಗಳಿವೆ. ಐಡಿಯಲ್ ಹೋಮ್ಸ್ ಬಡಾವಣೆಯು ‘ಬಿ’ ಖರಾಬು ಜಾಗದಲ್ಲಿ ಇರುವುದು ದೃಢಪಟ್ಟಿದೆ. ಹೀಗಾಗಿ ಒತ್ತುವರಿ ಮಾಡಿಕೊಂಡ ಎಲ್ಲ ಕಟ್ಟಡಗಳನ್ನೂ ಶೀಘ್ರವೇ ವಶಕ್ಕೆ ಪಡೆಯಲು ಜಿಲ್ಲಾಳಿತ ನಿರ್ಧರಿಸಿದೆ.
‘ಬಿ’ ಖರಾಬು ಭೂಮಿಯಲ್ಲಿ ಯಾವುದೇ ನಿರ್ಮಾಣ ಕಾಮಗಾರಿ ನಡೆಸಲು ಅವಕಾಶವಿಲ್ಲ. ಜುಲೈ 28ರಂದು ನಗರದಲ್ಲಿ ಮಹಾಪೂರ ಉಂಟಾದ ಬಳಿಕ ಭೂದಾಖಲೆಗಳ ಇಲಾಖೆಯಿಂದ ರಾಜಕಾಲುವೆಗಳ ಸರ್ವೇ ಮಾಡಿಸಲಾಗಿತ್ತು. ದರ್ಶನ್ ಅವರ ಮನೆ, ಎಸ್.ಎಸ್. ಆಸ್ಪತ್ರೆ ಸೇರಿದಂತೆ ವಿವಿಧ ಕಟ್ಟಡಗಳು 7 ಎಕರೆ 31 ಗುಂಟೆಗಳಷ್ಟು ವಿಸ್ತೀರ್ಣದ ರಾಜಕಾಲುವೆ ಒತ್ತುವರಿ ಮಾಡಿಕೊಂಡಿವೆ ಎಂದು ಪರಿಶೀಲನೆಯಿಂದ ತಿಳಿದು ಬಂದಿದೆ.
Advertisement