ಬೆಂಗಳೂರು: ಸತತ ಬೆಲೆ ಏರಿಕೆಯಿಂದ ಬಸವಳಿದಿದ್ದ ಶ್ರೀ ಸಾಮಾನ್ಯರಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಪ್ರಯಾಣ ದರವನ್ನು ಇಳಿಕೆ ಮಾಡಿ ಸಲ್ವ ಮಟ್ಟಿಗೆ ಸಿಹಿಸುದ್ದಿ ನೀಡಿದೆ.
ಸಾಮಾನ್ಯ ಬಸ್ಗಳ ಪ್ರಯಾಣ ದರವನ್ನು ಎರಡನೇ ಹಂತದಲ್ಲಿ 12 ರೂ.ಗಳಿಂದ 10 ರೂ.ಗಳಿಗೆ ಕಡಿತ ಮಾಡಲಾಗಿದ್ದು, ಚಿಲ್ಲರೆ ಸಮಸ್ಯೆಯಿಂದ ಪ್ರಯಾಣಿಕರಿಗೆ ಆಗುತ್ತಿದ್ದ ತೊಂದರೆಯನ್ನು ಬಗೆಹರಿಸಲು 3,6 ಮತ್ತು 8ನೇ ಹಂತಗಳಲ್ಲಿ 1 ರೂ. ಹೆಚ್ಚಿಸಲಾಗಿದೆ. ಈ ಹೊಸ ದರ ನಾಡಿದ್ದು (ಏ. 15 ರಿಂದ) ಅನ್ವಯವಾಗಲಿದೆ.
ಪ್ರಯಾಣ ದರ ಇಳಿಕೆ ಮಾಡಿರುವುದರಿಂದ 1 ಮತ್ತು 2ನೇ ಹಂತದಲ್ಲೇ ಶೇ. 50 ರಷ್ಟು ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಸಾರ್ವಜನಿಕ ಸಾರಿಗೆಯನ್ನು ಹೆಚ್ಚೆಚ್ಚು ಬಳಸುವಂತೆ ಉತ್ತೇಜನ ನೀಡಲು ಹವಾನಿಯಂತ್ರಿತ ಬಸ್ಗಳಲ್ಲಿ 1,3,4 ಮತ್ತು 14ನೇ ಹಂತದಲ್ಲಿ 5 ರೂ. ಇಳಿಕೆ ಮಾಡಲಾಗಿದೆ. 10, 16,18,199 ಹಾಗೂ 22 ಹಂತಗಳಲ್ಲಿ ಸ್ವಲ್ಪ ಏರಿಕೆ ಮಾಡಲಾಗಿದೆ, .
ಹವಾ ನಿಯಂತ್ರಿತ ಬಸ್ಗಳಲ್ಲಿ ಮೊದಲ ಹಂತದ ದರವನ್ನು 15 ರಿಂದ 10ರೂ. ಮೂರನೇ ಹಂತ 35 ರಿಂದ 30, ನಾಲ್ಕನೇ ಹಂತ 45 ರಿಂದ 40 ಹಾಗೂ 14ನೇ ಹಂತದ ದರವನ್ನು 95 ರೂ.ಗಳಿಂದ 90 ರೂ.ಗೆ ಇಳಿಸಲಾಗಿದೆ. ಇದರಿಂದ ಶೇ. 30 ರಷ್ಟು ಪ್ರಯಾಣಿಕರಿಗೆ ಅನುಕೂಲವಾಗಲಿದೆ. 10,16,18 ಮತ್ತು 22ನೇ ಹಂತದ ದರಗಳಲ್ಲಿ ಕೊಂಚ ಪರಿಷ್ಕರಿಸಲಾಗಿದೆ ಎಂದು ಹೇಳಿದ್ದಾರೆ.