ಗುಂಡ್ಲುಪೇಟೆ: ಪ್ರಿನ್ಸ್ ಎಂಬ ಖ್ಯಾತಿ ಪಡೆದು ಪ್ರವಾಸಿಗರ ಮೆಚ್ಚಿನ ಗಂಡು ಹುಲಿ ಅನುಮಾನಾಸ್ಪದ ಸಾವು ಇದೀಗ ಬೆಳಕಿಗೆ ಬಂದಿದ್ದು ಹುಲಿ ಮುಖ ವಿರೂಪಗೊಳಿಸಿ ಹಲ್ಲಗಳನ್ನು ಕದ್ಯೊಯ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಏಪ್ರಿಲ್ 2ರಂದು ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಕುಂದಕೆರೆ ವಲಯದ ಲೊಕ್ಕೆರೆ ಬೀಟ್ ನಲ್ಲಿ ಪ್ರಿನ್ಸ್ ಹುಲಿ ಸಾವನ್ನಪ್ಪಿದ್ದ ಘಟನೆ ವರದಿಯಾಗಿತ್ತು. ಈ ಸಂಬಂಧ ಕಾಡಂಚಿನ ಚೆಲುವರಾಯನಪುರ ಗ್ರಾಮದ ಸೋಮ ಮತ್ತು ಬೊಮ್ಮ, ಹುಂಡೀಪುರದ ಚಿನ್ನಸ್ವಾಮಿ ಎಂಬುವರನ್ನು ಬಂಧಿಸಲಾಗಿದೆ.
ಸೋಮ ಮತ್ತು ಬೊಮ್ಮ ಸತ್ತ ಹುಲಿಯ ಮುಖದ ಭಾಗವನ್ನು ಮಚ್ಚಿನಿಂದ ಕತ್ತರಿಸಿ ಮೂರು ಹಲ್ಲುಗಳನ್ನು ಕದ್ದೊಯ್ದಿದ್ದರು. ಇದರಲ್ಲಿ ಒಂದು ಹಲ್ಲಿಗೆ ಒಂದು ಸಾವಿರದಂತೆ ಸೋಮ ಮತ್ತು ಬೊಮ್ಮ ಮಾರಾಟ ಮಾಡಿದ್ದಾರೆ.
ಸೋಮ ಆನೆ ದಂತ ಕಳವು ಪ್ರಕರಣದ ಆರೋಪಿಯಾಗಿದ್ದು ಈ ಸಂಬಂಧ ಪ್ರತಿವಾರವೂ ಅರಣ್ಯ ಕಚೇರಿಗೆ ಸಹಿ ಮಾಡಬೇಕಾಗಿತ್ತು. ಈ ವೇಳೆ ಅನುಮಾನಗೊಂಡ ಅರಣ್ಯ ಸಿಬ್ಬಂದಿಗಳು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.