ಬೆಳಗಾವಿ: ಮಹಾರಾಷ್ಟ್ರ ಏಕೀಕರಣ ಸಮಿತಿಯ ಕಾರ್ಯಕರ್ತ ಸೂರಜ್ ಕನಬರ್ಕರ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಅವಹೇಳನಕಾರಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬರೆದಿದ್ದಕ್ಕೆ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕನ್ನಡ ಸಂಘಟನೆಗಳು ಒತ್ತಾಯಿಸಿವೆ. ಇಂತಹ ಬರಹಗಳು ಕನ್ನಡ ಮತ್ತು ಮರಾಠಿ ಭಾಷಿಕರ ನಡುವೆ ಸಾಮರಸ್ಯವನ್ನು ಹಾಳು ಮಾಡಿ ಕಾನೂನು, ಸುವ್ಯವಸ್ಥೆಗೆ ಭಂಗ ತರುತ್ತವೆ ಎಂದು ಕಾರ್ಯಕರ್ತರು ಹೇಳಿದ್ದಾರೆ.
ಈ ಬಗ್ಗೆ ವಿವಿಧ ಕನ್ನಡಪರ ಸಂಘಟನೆಗಳ ನಾಯಕರು ಪೊಲೀಸ್ ಆಯುಕ್ತ ಟಿ.ಜಿ.ಕೃಷ್ಣ ಭಟ್ ಗೆ ಮನವಿ ಸಲ್ಲಿಸಿದ್ದು, ಕನಬರ್ಕರ್ ಕನ್ನಡಿಗರು, ಕನ್ನಡ ಭಾಷೆ ಮತ್ತು ಕರ್ನಾಟಕದ ವಿರುದ್ಧ ಇಂತಹ ಅವಹೇಳನಕಾರಿ ಹೇಳಿಕೆಗಳನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡುತ್ತಿರುವುದು ಇದೇ ಮೊದಲ ಸಲವಲ್ಲ ಎಂದು ಹೇಳಿದರು.
ಇದಕ್ಕೆ ಮುನ್ನ ಈ ವಿಷಯವನ್ನು ಜಿಲ್ಲಾಡಳಿತ ಮತ್ತು ಪೊಲೀಸರ ಗಮನಕ್ಕೆ ತಂದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಅದು ಅವರಿಗೆ ಸಲುಗೆಗೆ ಕಾರಣವಾಗಿದೆ. ಕನಬರ್ಕರ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಲಗೈಯಲ್ಲಿ ಕನ್ನಡ ಧ್ವಜವನ್ನು ಹಿಡಿದುಕೊಂಡು ಒಬ್ಬ ಮಹಿಳೆಯ ಹಿಂದೆ ಓಡುತ್ತಾ ಧ್ವಜದ ಕೆಳ ತುದಿಯಿಂದ ಮಹಿಳೆಗೆ ಹಿಂದಿನಿಂದ ಇರಿಯುವ ವ್ಯಂಗ್ಯಚಿತ್ರವನ್ನು ಪೋಸ್ಟ್ ಮಾಡಿದ್ದರು.
ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತ ದೀಪಕ್ ಗುಡಗನಟ್ಟಿ ಕನಬರ್ಕರ್ ವಿರುದ್ಧ ಮಾನಹಾನಿ ಕೇಸು ದಾಖಲಿಸಿದ್ದಾರೆ.