ಚಿತ್ರದುರ್ಗ: ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಜನ್ಮ ದಿನಾಚರಣೆಯಲ್ಲಿ ಮದಕರಿ ನಾಯಕರ ಫೋಟೋ ಹಾಕಿ ಜಿಲ್ಲಾಡಳಿತ ಎಡವಟ್ಟು ಮಾಡಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಆ.30 ರಂದು ಕೆಂಪೇಗೌಡರ ಜನ್ಮದಿನಾಚರಣೆಯನ್ನು ಆಚರಿಸಲಾಗಿತ್ತು. ಈ ವೇಳೆ ಕೆಂಪೇಗೌಡರ ಭಾವಚಿತ್ರ ಬಳೆಕೆ ಮಾಡುವುದರ ಬದಲು ಜಿಲ್ಲಾಡಳಿತ ಮದಕರಿ ನಾಯಕರ ಭಾವಚಿತ್ರವನ್ನು ಬಳಕೆ ಮಾಡಲಾಗಿತ್ತು. ಮಾಧ್ಯಮದವರು ಹಾಗೂ ಸಾರ್ವಜನಿಕರು ಇದನ್ನು ಗುರುತಿಸಿದ ಬಳಿಕ ಘಟನೆ ಬೆಳಕಿಗೆ ಬಂದಿದೆ.
ಪ್ರಾರಂಭದಲ್ಲಿ ತಪ್ಪಾಗಿರುವುದನ್ನು ನಿರಾಕರಿಸಿದ ಜಿಲ್ಲಾಡಳಿತದ ಅಧಿಕಾರಿಗಳು, ಆ ನಂತರ ತಪ್ಪಾಗಿರುವುದನ್ನು ಒಪ್ಪಿಕೊಂಡಿದ್ದಾರೆ. ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿರುವ ಶಾಸಕ ಜಿಹೆಚ್ ತಿಪ್ಪಾ ರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತಪ್ಪಿಗೆ ಹೊಣೆ ಹೊತ್ತುಕೊಂಡಿದೆ ಎಂದು ಹೇಳಿದ್ದಾರೆ.
ಹೆಚ್ಚುವರಿ ಜಿಲ್ಲಾಧಿಕಾರಿ ಟಿ ರಾಘವೇಂದ್ರ ಪ್ರತಿಕ್ರಿಯೆ ನೀಡಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸ್ಪಷ್ಟನೆ ಕೇಳಿದ್ದೇವೆ. ಸ್ಪಷ್ಟನೆ ದೊರೆತ ಮೇಲೆ ನಿಜವಾದ ಸಮಸ್ಯೆ ಏನಾಗಿತ್ತು ಎಂಬುದು ತಿಳಿಯಲಿದೆ ಎಂದಿದ್ದಾರೆ.