ಹುಬ್ಬಳ್ಳಿ: ರಾಜ್ಯದ ವಾಣಿಜ್ಯ ನಗರಿ ಹುಬ್ಬಳ್ಳಿಯ ಗಣೇಶಪೇಟೆ ನನಗೆ ಪಾಕಿಸ್ತಾನದಂತೆ ಕಾಣಿಸುತ್ತಿದೆ ಎಂದು ಗಣೇಶಪೇಟೆ ಮಸೀದಿಯ ಮುಸ್ಲಿಂ ಮೌಲ್ವಿ ಅಬ್ದುಲ್ ಹಮೀದ್ ಖೈರಾತಿ ಅವರು ಶನಿವಾರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಿನ್ನೆ ಗಣೇಶಪೇಟೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಮೌಲ್ವಿ ಪಾಕಿಸ್ತಾನ ನೋಡಬೇಕೆಂದರೆ, ಅಲ್ಲಿಗೇ ಹೋಗುವ ಅವಶ್ಯಕತೆ ಇಲ್ಲ. ಈ ಗಣೇಶಪೇಟೆ ನನಗೆ ಪಾಕಿಸ್ತಾನದಂತೆಯೇ ಕಾಣುತ್ತಿದೆ. ಇಲ್ಲಿಯೇ ಪಾಕಿಸ್ತಾನ ನಿರ್ಮಾಣವಾಗಿದೆ ಎಂದು ಹೇಳಿರುವ ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
‘ನಾವು ಒಗ್ಗಟ್ಟಿನಿಂದ ಎದೆ ಸೆಟೆಸಿ ನಿಂತರೆ ಯಾರೂ ನಮ್ಮ ತಂಟೆಗೆ ಬರುವುದಿಲ್ಲ’ ಎಂದೂ ಖೈರಾತಿ ಹೇಳಿದ್ದಾರೆ.
ಹುಬ್ಬಳ್ಳಿ ಉತ್ತರ ಎಸಿಪಿ ದಾವೂದ್ಖಾನ್ ಹಾಗೂ ಶಹರ ಠಾಣೆ ಇನ್ಸ್ಪೆಕ್ಟರ್ ಶಿವಾನಂದ ಚಲವಾದಿ ಅವರ ಸಮ್ಮುಖದಲ್ಲೇ ಮೌಲ್ವಿ ಈ ರೀತಿಯ ಹೇಳಿಕೆ ನೀಡಿದ್ದು, ಇದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ದಾವೂದ್ಖಾನ್ ಅವರು, ಮೌಲ್ವಿ ಖೈರಾತಿ ನೀಡಿದ ಹೇಳಿಕೆ ನನ್ನ ಗಮನಕ್ಕೆ ಬಂದಿಲ್ಲ. ನಾನು ಇನ್ಸ್ಪೆಕ್ಟರ್ ಜತೆ ಮಾತುಕತೆಯಲ್ಲಿ ತೊಡಗಿದ್ದ ವೇಳೆ ಅವರು ಆ ಮಾತುಗಳನ್ನಾಡಿರಬಹುದು ಎಂದಿದ್ದಾರೆ.
ದೇಶದಲ್ಲಿ ಎಲ್ಲರಿಗೂ ವಾಕ್ಸ್ವಾತಂತ್ರ್ಯವಿದೆ. ಆದರೆ, ದೇಶದ ವಿರುದ್ಧ ಹೇಳಿಕೆ ನೀಡುವುದನ್ನು ಸಹಿಸಲಾಗದು. ದೇಶದ ಗೌರವಕ್ಕೆ ಚ್ಯುತಿ ಬರುವಂತಹ ಹೇಳಿಕೆಯನ್ನು ಯಾರೇ ನೀಡಿದ್ದರೂ, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.