ವರದಿ ಫಲಶ್ರುತಿ: ಆಧಾರ್ ನೋಂದಣಿಗೆ ತೊಡಕು; ಪಿಂಚಣಿ ಸೌಲಭ್ಯ ವಂಚಿತ ಮಹಿಳೆಗೆ ನೆರವಿನ ಮಹಾಪೂರ

ಆಧಾರ್ ನೋಂದಣಿಗೆ ತೊಡಕುಂಟಾಗಿ ಪಿಂಚಣಿ ವಂಚಿತರಾಗಿದ್ದ ಕುಷ್ಟರೋಗ ಎದುರಿಸುತ್ತಿರುವ ಸಜೀದಾ ಬೇಗಂ (65) ಅವರಿಗೆ ಹಲವರು ನೆರವಿನ ಹಸ್ತ ಚಾಚಿದ್ದಾರೆ.
ಆಧಾರ್
ಆಧಾರ್
ಬೆಂಗಳೂರು: ಆಧಾರ್ ನೋಂದಣಿಗೆ ತೊಡಕುಂಟಾಗಿ ಪಿಂಚಣಿ ವಂಚಿತರಾಗಿದ್ದ ಕುಷ್ಟರೋಗ ಎದುರಿಸುತ್ತಿರುವ ಸಜೀದಾ ಬೇಗಂ (65) ಅವರಿಗೆ ಹಲವರು ನೆರವಿನ ಹಸ್ತ ಚಾಚಿದ್ದಾರೆ. ಘಟನೆ ಬಗ್ಗೆ ಮಾಹಿತಿ ಪಡೆದಿರುವ ಕಂದಾಯ ಇಲಾಖೆ ಕಾರ್ಯದರ್ಶಿ ಹಾಗೂ ಯುಐಡಿಎಐ ಈ ಬಗ್ಗೆ ಗಮನ ಹರಿಸುವುದಾಗಿ ತಿಳಿಸಿದ್ದಾರೆ. 
ಸಜೀದಾ ಕುಷ್ಟರೋಗದ ಕಾರಣ ತಮ್ಮ ಬೆರಳುಗಳನ್ನು, ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡಿದ್ದಾರೆ. ಈ ವರ್ಷದ ಆಗಸ್ಟ್ ನಲ್ಲಿ ರಾಜಾಜಿನಗರದಲ್ಲಿನ ಉಪ ತಹಶೀಲ್ದಾರ್ ಕಚೇರಿಯಿಂದ ಸಜೀದಾ ಗೆ ಪತ್ರವೊಂದು ಬಂದಿದ್ದು ಅದರಲ್ಲಿ, ಇನ್ನು ಏಳು ದಿನಗಳಲ್ಲಿ ಆಕೆಯ ಪಿಂಚಣಿ ಖಾತೆಯನ್ನು ಆಧಾರ್ ನೊಡನೆ ಸಂಪರ್ಕಿಸಲು ವಿಫಲವಾದರೆ ಪಿಂಚಣಿ ಸೌಲಭ್ಯ ಕಡಿತಗೊಳ್ಳುವುದೆಂದು ಬರೆಯಲಾಗಿತ್ತು. ಸಜೀದಾ ಬಳಿ ಆಧಾರ್ ಇರಲಿಲ್ಲ. ಆಧಾರ್ ನೊಂದಣಿಗೆ ಬೆರಳಚ್ಚು ಮತ್ತು ಕಣ್ಣಿನ ಸ್ಕ್ಯಾನ್ ಮಾಡುವುದು ಅಗತ್ಯ. ಆದರೆ ಕಣ್ಣಿನ ದೃಷ್ಟಿ ಹಾಗೂ ಬೆರಳುಗಳನ್ನು ಕಳೆದುಕೊಂಡಿರುವುದರಿಂದ ಅದು ಸಾಧ್ಯವಾಗುತ್ತಿಲ್ಲ. 
ಈ ಬಗ್ಗೆ ಮಾತನಾಡಿರುವ ರಾಷ್ಟ್ರೀಯ ಹೆಲ್ತ್ ಮಿಷನ್ ನ ನಿರ್ದೇಶಕ ರಥನ್ ಕೇಲ್ಕರ್, ಈ ವಿಷಯವನ್ನು ಸೆಂಟರ್ ಫಾರ್ ಇ-ಕಾಮರ್ಸ್ ನ ಗಮನಕ್ಕೆ ತಂದಿದ್ದೇನೆ, ಇದೇ ಮಾದರಿಯ ಪ್ರಕರಣಗಳು ಚಾಮರಾಜನಗರದಲ್ಲಿಯೂ ಕಂಡುಬಂದಿದೆ. ಈ ರೀತಿಯ ಪ್ರಕರಣಗಳಿಗೆ ಪರಿಹಾರ ಇನ್ನಷ್ಟೇ ಕಂಡುಕೊಳ್ಳಬೇಕಿದೆ ಎಂದು ಹೇಳಿದ್ದಾರೆ. 
ಸಜೀದಾ ಬೇಗಂಗೆ ನೆಟಿಜನ್ ಗಳ ನೆರವು 
 ಒಂದೆಡೆ ಸರ್ಕಾರಿ ಸಂಸ್ಥೆಗಳು ಸಜೀದಾ ಬೇಗಂ ಅವರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಯತ್ನಿಸುತ್ತಿದ್ದರೆ, ಮತ್ತೊಂದೆಡೆ ನೆಟಿಜನ್ ಗಳೂ ಸಹ ನೆರವಿಗೆ ಧಾವಿಸುತ್ತಿದ್ದಾರೆ. ಸಜೀದಾ ಬೇಗಂ ಕುರಿತ ವರದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನವದೆಹಲಿಯ ಡೀ ಶರ್ಮಾ, ನೇಹಾ ಬಾರ್ವೆ ವ್ಯಾಸ್, ಬಜಾಜ್ ಕ್ಯಾಪಿಟಲ್ ಲಿಮಿಟೆಡ್ ನ ಹಿರಿಯ ಫೈನಾನ್ಶಿಯಲ್ ಅಡ್ವೈಸರ್ ಆದ ಫಲಕ್ ರಬ್ನವಾಜ್, ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವವರು ಸಜೀದಾ ಬೇಗಂ ಗೆ ನೆರವು ನೀಡಲು ಆಸ್ಪತ್ರೆಯ ಅಧಿಕಾರಿಗಳನ್ನು ಸಂಪರ್ಕಿಸಲು ಯತ್ನಿಸುತ್ತಿದ್ದಾರೆ. 
ಈ ಪೈಕಿ ಯೋಗೇಶ್ ರಂಗನಾಥ್ ಎಂಬುವವರು ವರದಿ ಪ್ರಕಟಿಸಿದ್ದ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿ "ನನ್ನ ಸಾಮರ್ಥ್ಯವಿದ್ದಷ್ಟು ಸಹಾಯ ಮಾಡುತ್ತೇನೆ, ಡಿ.4 ರಂದು ಆಸ್ಪತ್ರೆಗೆ ಭೇಟಿ ನೀಡಿ ಹಣವನ್ನು ನೇರವಾಗಿ ನೀಡುತ್ತೇನೆ ಎಂದಿದ್ದಾರೆ, ಇನ್ನೂ ಕೆಲವರು ಟಿಎನ್ಐಇಯ ಹೈದರಾಬಾದ್ ನ ಪತ್ರಕರ್ತರನ್ನು ಸಂಪರ್ಕಿಸಿ ನೆರವು ನೀಡಲು ಮುಂದಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com