ಬೆಂಗಳೂರು: ಭಗ್ನ ಪ್ರೇಮಿಯಿಂದ ಯುವತಿಯ ಭಾವಿ ಪತಿ ಹತ್ಯೆ

ಕುರುಡು ಪ್ರೇಮವು ಓರ್ವ ವ್ಯಕ್ತಿಯನ್ನು ಯಾವರೀತಿ ಬೇಕಾದರೂ ಆಟವಾಡಿಸಬಲ್ಲದು ಎನ್ನುವುದಕ್ಕೆ ಡಿ.3ರ ರಾತ್ರಿ ಬೆಂಗಳೂರಿನಲ್ಲಿ ನಡೆದ ಹತ್ಯೆ ಪ್ರಕರಣವೇ ಸಾಕ್ಷಿ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಬೆಂಗಳೂರು: ಕುರುಡು ಪ್ರೇಮವು ಓರ್ವ ವ್ಯಕ್ತಿಯನ್ನು ಯಾವರೀತಿ ಬೇಕಾದರೂ ಆಟವಾಡಿಸಬಲ್ಲದು ಎನ್ನುವುದಕ್ಕೆ ಡಿ.3ರ ರಾತ್ರಿ ಬೆಂಗಳೂರಿನಲ್ಲಿ ನಡೆದ ಹತ್ಯೆ ಪ್ರಕರಣವೇ ಸಾಕ್ಷಿ.  ಕನಕಪುರ ರಸ್ತೆಯ ಉತ್ತರಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಮಹೀಂದ್ರ ಬ್ಯಾಂಕ್‌ನ ಸಹಾಯಕ ವ್ಯವಸ್ಥಾಪಕ ಅನಿಲ್ ಕುಮಾರ್ (29) ಎನ್ನುವವರನ್ನು  ಶಿವಬಸವೇಗೌಡ  ಎನ್ನುವ ವ್ಯಕ್ತಿ ಹತ್ಯೆ ಮಾಡಿದ್ದಾನೆ. ಕಗ್ಗಲಿಪುರ ಪೋಲೀಸರು ಅಪರಾಧಿ ಶಿವಬಸವೇಗೌಡನನ್ನು ಬಂಧಿಸಿದ್ದು ಅವನಿಂದಘಿರಂಗವಾದ ಹತ್ಯೆಯ ಮರ್ಮ ಎಂತಹವರನ್ನೂ ಬೆಚ್ಚಿ ಬೀಳಿಸಲಿದೆ.
ಬನಶಂಕರಿ 3ನೇ ಹಂತದ ನಿವಾಸಿಯಾದ ಶಿವಬಸವೇಗೌಡ  ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದು ಆತ ಪ್ರೀತಿಸುತ್ತಿದ್ದ ಯುವತಿಯೊಡನೆ ಅನಿಲ್ ವಿವಾಹ ನಿಶ್ಚಯವಾಗಿತ್ತು. ಇದರಿಂದ ಕುಪಿತನಾದ ಆರೋಪಿ, ಅನಿಲ್ ಕುಮಾರ್ ನನ್ನು ಎಲೆಕ್ಟ್ರಿಕ್ ಶಾಕ್ ಕೊಟ್ಟು ಭೀಕರವಾಗಿ ಹತ್ಯೆ ಮಾಡಿದ್ದಾನೆ.
ಕನಕಪುರದ ಸಾತನೂರಿನವನಾದ ಶಿವಬಸವೇಗೌಡ ಎರಡು ವರ್ಷಗಳ ಹಿಂದೆ ನಗರಕ್ಕೆ ಬಂದು ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ. ಅದೇ ಸಂಸ್ಥೆಯ ಟೆಲಿ ಕಾಲರ್ ಆಗಿದ್ದ ಯುವತಿಯ ಮೇಲೆ ಅವನಿಗೆ ಪ್ರೀತಿ ಮೂಡಿದ್ದು ಮದುವೆ ಪ್ರಸ್ತಾಪವನ್ನೂ ಮಾಡಿದ್ದ. ಆದರೆ 'ಜಾತಕ ಹೊಂದುವುದಿಲ್ಲ' ಎನ್ನುವ ಕಾರಣಕ್ಕೆ ಯುವತಿ ಈ ಪ್ರಸ್ತಾಪ ತಿರಸ್ಕರಿಸಿದ್ದಳು. ಅದಾಗ್ ಕೆಲ ದಿನಗಳಲ್ಲಿ ಅವನು ಬೇರೆ ಯುವತಿಯೊಡನೆ ವಿವಾಹವಾಗಿದ್ದ.
ಆದರೆ ಶಿವಬಸವೇಗೌಡ ನಿಗೆ ಆ ಯುವತಿಯ ಮೇಲಿನ ಮೋಹ ಅಳಿಯಲಿಲ್ಲ. ಅಷ್ಟರಲ್ಲಿ ಆಕೆಗೂ ಅನಿಲ್ ನೊಡನೆ ವಿವಾಹ ನಿಶ್ಚಯವಾಯಿತು. ಹೀಗೆ ವಿವಾಹ ನಿಶ್ಚಯವಾದ ನಂತರ ಆಕೆ ಕೆಲಸ ಬಿತ್ಟಿದ್ದಳು. ಆದರೆ ಆರೋಪಿ ಮಾತ್ರ ಅವಳ ಸಂಬಂಧ ಬಿಡಲಿಲ್ಲ. ಕುಶಲೋಪರಿ ವಿಚಾರಿಸುವ ನೆಪ ಹೇಳಿ ಅವಳ ಮನೆಗೆ ತೆರಳಿದ ಶಿವಬಸವೇಗೌಡ ಆಕೆ ವಿವಾಹವಾಗಲಿದ್ದ ಅನಿಲ್ ದೂರವಾಣಿ ಸಂಖ್ಯೆಯನ್ನು ಗುಟ್ಟಾಗಿ ಬರೆದುಕೊಂಡ.  ಹಾಗಾದ ನಂತರ ಅನಿಲ್ ಗೆ ಕರೆ ಮಾಡಿ ಅವನೊಡನೆ ಸ್ನೇಹವನ್ನು ಬೆಳೆಸಿದ. ಅನಿಲ್ ಸಹ ಆರೋಪಿಯ ಸಂಚು ಅರಿಯದೆ ಅವನೊಡನೆ ಮುಕ್ತವಾಗಿ ಬೆರೆತರು.
ಇಷ್ಟಾಗಿ ಆರೋಪಿ ಚಿಕ್ಕಪೇಟೆಯ ಅಂಗಡಿಗೆ ತೆರಳಿ ಎಲೆಕ್ಟ್ರಿಕ್ ತಂತಿ, ವಿದ್ಯುತ್ ನಿರೋಧಕ ಗ್ಲೌಸ್ ಹಾಗೂ ಬೂಟುಗಳನ್ನು ಖರೀದಿ ನಡೆಸಿದ. ಮರದ ತುಂಡೊಂದಕ್ಕೆ ತಂತಿ ಸುತ್ತಿಕೊಂಡು ಡಿ.3ರ ಬೆಳಗ್ಗೆ ಉತ್ತರಿ ಗ್ರಾಮದ ನಿರ್ಜನ ಪ್ರದೇಶಕ್ಕೆ ತೆರಳಿದ ಆತ ವಿದ್ಯುತ್ ನಿರೋಧಕ ಉಪಕರಣಗಳನ್ನು ಧರಿಸಿಕೊಂಡು  ಕಂಬ ಏರಿ ಮರದ ತುಂಡುಗಳನ್ನು ಹೈಟೆನ್ಶನ್‌ ವೈರ್‌ ಮೇಲೆ ಹಾಕಿ, ತಂತಿಯನ್ನು ಕೆಳಗೆ ಬಿಟ್ಟಿದ್ದ. ಮತ್ತೆ ಮನೆಗೆ ಮರಳಿದ ನಂತರ ಅನಿಲ್ ಗೆ ಕರೆ ಮಾಡಿ ಗ್ರಾಮದಲ್ಲಿ ವಿದ್ಯುತ್ ಸಮಸ್ಯೆಯಾಗಿದೆ, ಹೋಗಿ ಪರೀಕ್ಷಿಸಿ ಬರೋಣ ಎಂದು ಕರೆದೊಯ್ದಿದ್ದ.
ಕರೆಂಟ್ ಶಾಕ್: ಕಂಬದ ಕೆಳಗೆ ಅನಿಲ್ ನನ್ನು ನಿಲ್ಲಿಸಿಕೊಂಡ ಶಿವಬಸವೇಗೌಡ  ತಾನು ವಿದ್ಯುತ್ ನಿರೋಧಕ ಉಪಕರಣಗಳನ್ನು ಧರಿಸಿಕೊಂಡು ಆ ತಂತಿಗಳನ್ನು ಅನಿಲ್ ಅವರ ಮುಖಕ್ಕೆ ಒತ್ತಿ ಹಿಡಿದ. ಆಗ ವಿದ್ಯುತ್ ಪ್ರವಹಿಸಿ ಅವರ ತಲೆ ಒಡೆದು ಹೋಳಾಗಿತ್ತು. ಅವರು ಅಲ್ಲೇ ಮೃತಪಟ್ಟಿದ್ದರು. ಮಾರನೆ ದಿನ ಮೃತದೇಹ ಕಂಡ ಸಾರ್ವಜನಿಕರು ಪೋಲೀಸರಿಗೆ ವಿಚಾರ ತಿಳಿಸಿದ್ದಾರೆ. ಮೃತದೇಹ ಕಂಡಾಗ ಸಲಾಕೆಯಿಂದ ಹೊಡೆದು ಕೊಂದಂತೆ ಭಾವಿಸಲಾಗಿತ್ತಾದರೂ ಮರಣೋತ್ತರ ಪರೀಕ್ಷೆ ಬಳಿಕ ಎಲೆಕ್ಟ್ರಿಕ್ ಶಾಕ್ ನೀಡಿದ್ದು ತಿಳಿಯಿತು.
ಅನಿಲ್ ನನ್ನು ಕೊಂದ ನಂತರ ಆರೋಪಿ ತನ್ನ ಮನೆಯಲ್ಲೇ ಆ ಮರದ ತುಂಡು ಹಾಗೂ ವಯರ್ ಗಳನ್ನು ಸುಟ್ಟು ಹಾಕಿ ಸಾಕ್ಷಗಳನ್ನು ನಾಶ ಮಾಡಿದ್ದಲ್ಲದೆ ಈ ಹತ್ಯೆ ಸಂಚಿಗಾಗಿ ಹೊಸ ಸಿಮ್ ಖರೀದಿಸಿದ್ದು ಅದರಲ್ಲಿ ಅನಿಲ್ ಹೊರತಾಗಿ ಇನ್ನಾರಿಗೂ ಕರೆ ಮಾಡಿರಲಿಲ್ಲ! ಹೀಗೆ ತಾನು ಎಸಗಿದ ಅಪರಾಧಗಳಿಂದ ಪಾರಾಗಲು ಆರೋಪಿ ಸಾಕಷ್ಟು ಸಂಚು ನಡೆಸಿದ್ದ. ಆದರೆ ವಿಧಿ ಬೇರೆಯಾಗಿತ್ತು. ಪೋಲೀಸಾರು ಅನಿಲ್ ನೊಂದಿಗೆ ನಿಶ್ಚಯ ವಾಗಿದ್ದ ಯುವತಿಯನ್ನು ವಿಚಾರಿಸಿದ್ದಾರೆ. ಆಗ ಯುವತಿ ಶಿವಬಸವೇಗೌಡ ತನಗೆ ಮದುವೆಯಾಗೆಂದು ಪೀಡಿಸುತ್ತಿದ್ದ ವಿಚಾರ ಹೇಳಿದ್ದಾಳೆ. ಅವಳ ಹೇಳಿಕೆಯ ಆಧಾರದಲ್ಲಿ ಆರೋಪಿ ಶಿವಬಸವೇಗೌಡನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹತ್ಯೆ ಹಿಂದಿನ ಕ್ರೂರ ರಹಸ್ಯ ಬಹಿರಂಗವಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com