ಬಳ್ಳಾರಿ: ರಾಜ್ಯ ಸರ್ಕಾರದ ವಿರುದ್ಧ ಸಮರ ಸಾರಿ, ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದ ಕೂಡ್ಲಿಗಿ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ, ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಪ್ರಮುಖರ ವಿರುದ್ಧ ಕಾನೂನು ಹೋರಾಟಕ್ಕೆ ಅನುಮತಿ ನೀಡಬೇಕೆಂದು ಕೋರಿದ್ದಾರೆ.
ಕೂಡ್ಲಿಗಿಯಿಂದ ತಮ್ಮನ್ನು ವರ್ಗಾಯಿಸುವುದರ ಹಿಂದೆ ಒಳಸಂಚಿದ್ದು, ಈ ಕುರಿತು ಸಿಎಂ, ಗೃಹ ಸಚಿವರು. ಪರಮೇಶ್ ನಾಯಕ್ ಸೇರಿ ಎಂಟು ಜನರ ವಿರುದ್ಧ ನ್ಯಾಯಾಲಯದಲ್ಲಿ ನೇರವಾಗಿ ದೋಷಾರೋಪಣ ಪತ್ರ ಸಲ್ಲಿಸಲು ಅನುಮತಿ ನೀಡುವಂತೆ ಕೋರಿ ಅನುಪಮಾ ಶೆಣೈ ರಾಜ್ಯಪಾಲರು, ಸ್ಪೀಕರ್, ಸಭಾಪತಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಸಿಆರ್ ಪಿಸಿ ಸೆಕ್ಷನ್ 200 ಅಡಿಯಲ್ಲಿ ಆರೋಪಿಗಳ ವಿರುದ್ಧ ನೇರವಾಗಿ ಚಾರ್ಜ್ ಶೀಟ್ ಪೈಲ್ ಮಾಡಲು ನ್ಯಾಯಾಲಯಕ್ಕೆ ಅನುಮತಿ ಕೋರಿದ್ದರು. ಅನುಮತಿ ಕೊಡುವಂತೆ ಒತ್ತಡ ಹೇರಲು ಜನತೆ ತಮಗೆ ಬೆಂಬಲ ನೀಡಬೇಕೆಂದು ಕೋರಿದ್ದಾರೆ.
ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಡಾ. ಜಿ.ಪರಮೇಶ್ವರ್, ಹೂವಿನ ಹಡಗಲಿ ಶಾಸಕ, ಮಾಜಿ ಸಚಿವ ಪಿ.ಟಿ.ಪರಮೇಶ್ವರ್ ನಾಯ್ಕ, ರಾಜ್ಯ ಗೃಹ ಸಚಿವರ ಭದ್ರತಾ ಸಲಹೆಗಾರ ಕೆಂಪಯ್ಯ, ನಿಕಟಪೂರ್ವ ಡಿಜಿಪಿ ಓಂ ಪ್ರಕಾಶ್ರಾವ್, ರಾಜ್ಯ ಚುನಾವಣಾ ಆಯೋಗದ ಆಯುಕ್ತ ಎನ್. ಶ್ರೀನಿವಾಸಾಚಾರಿ, ಬಳ್ಳಾರಿ ವಲಯದ ಐಜಿಪಿ ಎಸ್.ಮುರುಗನ್ ಹಾಗೂ ಬಳ್ಳಾರಿ ಎಸ್ಪಿ ಆರ್.ಚೇತನ್ ವಿರುದ್ಧ ಕೋಟ್ ನಲ್ಲಿ ಅಭಿಯೋಜನೆ ನಡೆಸಲು ಕೋರಿ ಪತ್ರ ಬರೆದಿರುವುದಾಗಿ ಹೇಳಿದರು.
ತಾವು ಕೂಡ್ಲಿಗಿಯಲ್ಲಿ ಡಿವೈಎಸ್ ಪಿಯಾಗಿದ್ದಾಗ ಪಂಚಾಯತ್ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ರಾಜಕೀಯ ಹಾಗೂ ಲಿಕ್ಕರ್ ಲಾಬಿಗಳ ಒತ್ತಡಕ್ಕೆ ಮಣಿದು ತಮ್ಮನ್ನು ವರ್ಗಾಯಿಸಲಾಗಿತ್ತು. ಇದರ ಹಿಂದಿನ ಒಳಸಂಚಿನ ಬಗ್ಗೆ ಕೋರ್ಟ್ಲ್ಲಿ ನೇರವಾಗಿ ದೋಷಾರೋಪಣೆ ಪತ್ರ ಸಲ್ಲಿಸಲು ಅನುವಾಗುವಂತೆ ಪ್ರಕರಣ ದಾಖಲಿಸಲು ಅಭಿಯೋಜನೆಗೆ ಅನುಮತಿ ನೀಡುವಂತೆ ಸೂಕ್ತ ದಾಖಲೆಗಳೊಂದಿಗೆ ಪತ್ರ ಬರೆಯಲಾಗಿದೆ. ತಮ್ಮ ಮನವಿಗೆ ಸ್ಪಂದಿಸಿ ಅಭಿಯೋಜನೆಗೆ ಅನುಮತಿ ನೀಡುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.
ಈ ಹೋರಾಟ ನಾನು ಪುನಃ ಇಲಾಖೆ ಕೆಲಸಕ್ಕೆ ಸೇರಿಕೊಳ್ಳಲು ನಡೆಸುತ್ತಿರುವ ಪ್ರಯತ್ನವೆಂದು ಬಿಂಬಿಸಲಾಗುತ್ತಿದೆ. ಈ ಒಳಸಂಚು ಹಾಗೂ ಭ್ರಷ್ಟಾಚಾರದ ಬಗ್ಗೆ ಸಂಸತ್, ವಿಧಾನ ಮಂಡಲದಲ್ಲಿ ಚರ್ಚೆಯಾಗಬೇಕು. ಪಟ್ಟಭದ್ರ ಹಿತಾಸಕ್ತಿಗಳ ಈ ಹುನ್ನಾರ, ರಾಜಕೀಯ ಹಾಗೂ ಲಿಕ್ಕರ್ ಲಾಬಿ ವಿರುದ್ಧ ನನ್ನ ಹೋರಾಟ ಮುಂದುವರಿಯಲಿದೆ ಎಂದು ಅನುಪಮಾ ಶೆಣೈ ತಿಳಿಸಿದರು.
ಮಾಜಿ ಸಚಿವ ಎಚ್ ವೈ ಮೇಟಿ ಸೆಕ್ಸ್ ಸಿಡಿ ಪ್ರಕರಣ ಸಂಬಂಧ ಬುಧವಾರ ಸಿಐಡಿ ಪೊಲೀಸರು ಅನುಪಮಾ ಶೆಣೈ ಅವರನ್ನು ವಿಚಾರಣೆಗೊಳಪಡಿಸಿದ್ದರು.
Advertisement