ಬೆಂಗಳೂರು: ಒಡಿಸ್ಸಾದ ದನ ಮಾಂಜಿ ತನ್ನ ಹೆಂಡತಿಯ ಶವವನ್ನು ಹೆಗಲ ಮೇಲೆ ಹೊತ್ತು ಸಾಗಿಸಿದ ಫೋಟೋ ಇಡಿ ದೇಶದ ಗಮನ ಸೆಳೆದಿತ್ತು, ಆದರೆ ಅಂತಹುದ್ದೇ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನಲ್ಲಿ ನಡೆದಿದೆ.
ತುಮಕೂರು ಜಿಲ್ಲೆ, ಮಧುಗಿರಿ ತಾಲೂಕಿನ ವಿರಾಪುರ ಗ್ರಾಮದ ತಿಮ್ಮಪ್ಪ, ಅನಾರೋಗ್ಯದಿಂದ ಬಳಲುತ್ತಿದ್ದ ತಮ್ಮ 20 ವರ್ಷದ ಮಗಳಾದ ರತ್ನಮ್ಮನನ್ನು ಮಧುಗಿರಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ, ಈ ವೇಳೆ ಪರೀಕ್ಷಿಸಿದ ವೈದ್ಯರು ಆಕೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ, ಆದರೆ ಶವವನ್ನು ಸಾಗಿಸಲು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಯಾವುದೇ ಆ್ಯಂಬುಲೆನ್ಸ್ ಇರಲಿಲ್ಲ. ಖಾಸಗಿ ವಾಹನಕ್ಕೆ ನೀಡಲು ತಿಮ್ಮಪ್ಪನ ಬಳಿ ಹಣ ವಿರಲಿಲ್ಲ. ಸರ್ಕಾರಿ ವಾಹನಗಳಲ್ಲಿ ಸಾಗಿಸಲು ಚಾಲಕರು ನಿರಾಕರಿಸಿದ ಕಾರಣ ತಿಮ್ಮಪ್ಪ ತಮ್ಮ ಟಿವಿಎಸ್ ಮೊಪೆಡ್ ನಲ್ಲಿಯೇ ಮಗಳ ಶವವನ್ನು ಗ್ರಾಮಕ್ಕೆ ಸಾಗಿಸಿದ್ದಾರೆ.
ತಿಮ್ಮಪ್ಪ ಸಂಬಂಧಿ ಟಿವಿಎಸ್ ಮೊಪೆಡ್ ಓಡಿಸಿದ್ದಾರೆ, ಹಿಂಬದಿ ಸವಾರ ಶವವನ್ನು ಹಿಡಿದುಕೊಂಡು ಊರಿಗೆ ತಲುಪಿದ್ದಾರೆ. ಜಿಲ್ಲಾ ಆರೋಗ್ಯಾಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿರುವ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
Advertisement