ಬೆಂಗಳೂರು: ಚಿಕ್ಕಮಗಳೂರಿನ ತರಿಕೇರೆ ತಾಲೂಕಿನ ಬೆತ್ತಿಚೌಕಕ್ಕೆ ಬಂದಿದ್ದ 12 ಪ್ರವಾಸಿಗರ ತಂಡವೊಂದು ತಡ ರಾತ್ರಿ ಬೇಟೆಯಾಡಿ 2 ಕಡವೆಗಳನ್ನು ಹತ್ಯೆ ಮಾಡಿ ಪೊಲೀಸರ ಅತಿಥಿಯಾಗಿದ್ದಾರೆ.
ಭದ್ರ ಮೀಸಲು ಅರಣ್ಯ ಪ್ರದೇಶದಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ಅನುಕೂಲ ಮಾಡಿಕೊಟ್ಟ ಬೆನ್ನಲ್ಲೇ ವನ್ಯ ಪ್ರಾಣಿಗಳ ಜೀವಕ್ಕೆ ಅಪಾರ ಬೆಲೆ ತೆರುವಂತಾಗಿದೆ. ಭದ್ರ ಮೀಸಲು ಆರಣ್ಯದಲ್ಲಿರುವ ತಾಣೆಗೆಬೈಲು ವನ್ಯ ಜೀವಿ ಧಾಮದಲ್ಲಿ ನಡೆದಿರುವ ಈ ಘಟನೆ ಕಾಡಿನ ಸರಿಯಾದ ನಿರ್ವಹಣೆಯಾಗುತ್ತಿಲ್ಲ ಎಂಬುದನ್ನು ತೋರಿಸುತ್ತಿದೆ, ಅರಣ್ಯ ಹಾಗೂ ವನ್ಯಜೀವಿಗಳ ನಾಶ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಭದ್ರಾ ಹುಲಿ ಸಂರಕ್ಷಿತ ಅರಣ್ಯದಲ್ಲಿ ಭೇಟೆಯಾಡುವುದು ಹೊಸತಲ್ಲ, ಆರೋಪಿಗಳು ಸಿಕ್ಕಿ ಬಿದ್ದಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ. ಆದರೆ ಸ್ಥಳೀಯರು ವರ್ಷಪೂರ್ತಿ ಇಲ್ಲಿ ಪ್ರಾಣಿಗಳನ್ನು ಬೇಟೆಯಾಡಿ , ಇಲ್ಲಿಗೆ ಬರುವ ಪ್ರವಾಸಿಗರಿಗೆ ಮಾರುತ್ತಾರೆ. ಹಣ ಹಾಗೂ ಮಧ್ಯಕ್ಕಾಗಿ ಕೆಲ ಸ್ಥಳೀಯರು ಇದನ್ನೇ ವೃತ್ತಿಯನ್ನಾಗಿಸಿಕೊಂಡಿದ್ದಾರೆ ಎಂದು ವನ್ಯಜೀವಿ ಕಾರ್ಯಕರ್ತರು ಆರೋಪಿಸಿದ್ದಾರೆ.
ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಹೆಚ್ತಿನ ಪ್ರೋತ್ಸಾಹ ನೀಡಿದ ಮೇಲೆ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ, ಎಲ್ಲೆಡೆ ಪ್ಲಾಸ್ಟಿಕ್ ಕವರ್ ಹಾಗೂ ಬಾಟಲ್ ಗಳು ಎರಚಾಡುಡುತ್ತಿವೆ. ಅರಣ್ಯ ಪ್ರದೇಶದೊಳಗೆ ಕ್ಯಾಂಪ್ ಫೈರ್ ಹಾಗೂ ಮಧ್ಯಪಾನ ಸೇವನೆ ಇಲ್ಲಿ ಸರ್ವೇಸಾಮಾನ್ಯವಾಗಿದೆ ಎಂದು ಮತ್ತೊಬ್ಬ ಸ್ಥಳೀಯರು ಆರೋಪಿಸಿದ್ದಾರೆ.
ಈ ಮೊದಲು ಇಲ್ಲಿನ ಸ್ಥಳೀಯ ಕಾಫಿ ಫ್ಲಾಂಟರ್ ಗಳು ಶಿಕಾರಿ ಮಾಡುತ್ತಿದ್ದರು, ಆಗ ಬೇಟೆಯಾಡುವವರ ಪ್ರಮಾಣ ಕಡಿಮೆ ಇತ್ತು, ಆದರೆ ಈಗ ಇಲ್ಲಿಗೆ ಬರುವ ಪ್ರವಾಸಿಗರು ಕೂಡ ಪ್ರಾಣಿಗಳ ಬೇಟೆಗೆ ಮುಂದಾಗಿದ್ದಾರೆ. ಆದರೆ ಅರಣ್ಯ ಸಿಬ್ಬಂದಿ ಸಂಖ್ಯೆ ಸೀಮಿತ ಪ್ರಮಾಣದಲ್ಲಿರುವುದರಿಂದ ಎಲ್ಲೆಡೆ ಕಣ್ಗಾವಲು ಮಾಡುವುದು ಕಷ್ಟವಾಗುತ್ತಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ಇಂಥಹ ಅನೇಕ ಘಟನೆಗಳು ನಡೆದಿವೆ. ಇಂಥಹ ಘಟನೆಗಳಿಂದಾಗಿ ಮುಳ್ಳಯ್ಯನಗಿರಿ ಮತ್ತು ಬಾಬಾಬುಡನ್ ಗಿರಿ ಅರಣ್ಯಗಳು ತಮ್ಮ ಆಕರ್ಷಣೆಯನ್ನೇ ಕಳೆದುಕೊಂಡಿವೆ ಎಂದು ಸ್ಥಳೀಯರು ಅಭಿಪ್ರಾಯ ಪಟ್ಟಿದ್ದಾರೆ.
Advertisement