
ಬೆಂಗಳೂರು: 2014 ನೇ ವರ್ಷಕ್ಕೆ ಹೋಲಿಸಿದರೇ ರಾಜ್ಯದಲ್ಲಿ 2015 ರಲ್ಲಿ ರೈತರ ಆತ್ಮಹತ್ಯೆ ಪ್ರಮಾಣ ಎರಡು ಪಟ್ಟು ಹೆಚ್ಚಾಗಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆ ವರದಿ ಮಾಡಿದೆ.
ಬ್ಯಾಂಕ್ ಸಾಲ, ಬೆಳೆ ನಾಶ, ಅನಾರೋಗ್ಯ ಮುಂತಾದ ಸಮಸ್ಯೆಗಳಿಂದಾಗಿ ರೈತರ ಆತ್ಮಹತ್ಯೆ ಪ್ರಮಾಣ ಹೆಚ್ಚಾಗಿದ್ದು ಮಹಾರಾಷ್ಟ್ರದ ನಂತರದ ಸ್ಥಾನವನ್ನು ಕರ್ನಾಟಕ ಪಡೆದಿದೆ.
2015 ರಲ್ಲಿ ಮಹಾರಾಷ್ಟ್ರದಲ್ಲಿ 4,291 ರೈತರು ಸಾವಿಗೆ ಶರಣಾಗಿದ್ದರು. ಅಂತೆಯೇ ಕರ್ನಾಟಕದಲ್ಲಿ 1,569 ರೈತರು ಸಾವಿನ ಮನೆ ಕದ ತಟ್ಟಿದ್ದಾರೆ. 2014 ರಲ್ಲಿ ಮಹಾರಾಷ್ಟ್ರದಲ್ಲಿ 4,004 ಮಂದಿ ಹಾಗೂ 2015 ರಲ್ಲಿ 4,291 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕರ್ನಾಟಕದಲ್ಲಿ 2014 ರಲ್ಲಿ 768 ಹಾಗೂ 2015 ರಲ್ಲಿ 1,569 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂಕಿ ಅಂಶಗಳ ಪ್ರಕಾರ ರೈತರ ಆತ್ಮಹತ್ಯೆ ಪ್ರಮಾಣದಲ್ಲಿ ಎರಡು ಪಟ್ಟು ಹೆಚ್ಚಾಗಿದೆ. ದಕ್ಷಿಣ ಭಾರತದ ಹಲವು ಜಿಲ್ಲೆಗಳಲ್ಲಿ ರೈತರ ಆತ್ಮಹತ್ಯೆಗಳ ಪ್ರಮಾಣ ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.
ರಾಜ್ಯದಲ್ಲಿ ಆತ್ಮಹತ್ಯೆ ಪ್ರಮಾಣ ಹೆಚ್ಚಲು ಕೌಟುಂಬಿಕ ಸಮಸ್ಯೆಗಳೇ ಕಾರಣ
ಬೆಂಗಳೂರು ನಗರದಲ್ಲಿ ನಡೆಯುವ ಬಹುತೇಕ ಆತ್ಮಹತ್ಯೆ ಪ್ರಕರಣಗಳಿಗೆ ಕೌಟುಂಬಿಕ ಸಮಸ್ಯೆಗಳೇ ಕಾರಣ ಎಂದು ವರದಿ ತಿಳಿಸಿದೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆ ಮಾಹಿತಿ ಪ್ರಕಾರ, ಬೆಂಗಳೂರಿನಲ್ಲಿ 2015 ರಲ್ಲಿ 1,885 ಪ್ರಕರಣಗಳು ನಡೆದಿವೆ, ಚೆನ್ನೈನಲ್ಲಿ 2274 ಆತ್ಮಹತ್ಯೆಗಳು ನಡೆದು ಮೊದಲ ಸ್ಥಾನದಲ್ಲಿದೆ. ನವದೆಹಲಿ 1,555 ಆತ್ಮಹತ್ಯೆಗಳಿಗೆ ಸಾಕ್ಷಿಯಾಗಿದೆ.
ಗಮನಿಸಿಬೇಕಾದ ಅಂಶವೆಂದರೇ ಆತ್ಮಹತ್ಯೆ ಮಾಡಿಕೊಂಡವರಲ್ಲಿ ಹೆಚ್ಚಿನವರು ಪುರುಷರು. 1,237 ಪುರುಷರು ಹಾಗೂ 618 ಮಹಿಳೆಯರು ಆತ್ಮಹತ್ಯೆಗೆ ಶರಣಾಗಿದ್ದಾರೆ.ಕೌಟುಂಬಿಕ ಸಮಸ್ಯೆಗಳನ್ನು ಹೊರತುಪಡಿಸಿದರೇ ಅನಾರೋಗ್ಯದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವವರೇ ಹೆಚ್ಚು ಎಂದು ಮಾಹಿತಿಯಲ್ಲಿ ತಿಳಿಸಲಾಗಿದೆ.
ಹೆಚ್ಚಿನ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿರುವುದು ಮಹಾರಾಷ್ಟ್ರದಲ್ಲಿ 16,970, ತಮಿಳುನಾಡಿನಲ್ಲಿ 15,777, ಪಶ್ಚಿಮ ಬಂಗಾಳದಲ್ಲಿ 14,602, ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಒಟ್ಟಾರೆ ದೇಶದಲ್ಲಿ ಶೇ.51.2 ರಷ್ಟು ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ.
ರಸ್ತೆ ಅಪಘಾತ: ರಾಜ್ಯಕ್ಕೆ ಎರಡನೇ ಸ್ಥಾನ
ರಸ್ತೆ ಅಪಘಾತಗಳ ಸಂಖ್ಯೆಯಲ್ಲೂ ಹೆಚ್ಚಳವಾಗಿದ್ದು, ತಮಿಳುನಾಡಿನ ನಂತರ ಕರ್ನಾಟಕ ಸ್ಥಾನ ಪಡೆದುಕೊಂಡಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆ ವರದಿ ಮಾಡಿದೆ. ಎನ್ ಸಿ ಆರ್ ಬಿ ಪ್ರಕಾರ, ಕರ್ನಾಟಕದಲ್ಲಿ 2014 ರಲ್ಲಿ 44,-11 ಮತ್ತು ತಮಿಳುನಾಡಿನಲ್ಲಿ 69,059 ರಸ್ತೆ ಅಪಘಾತಗಳು ದಾಖಲಾಗಿವೆ.
2015 ರಲ್ಲಿ ಅಪಘಾತ ಸಂಖ್ಯೆಯಲ್ಲಿ ಕರ್ನಾಟಕ 4ನೇ ಸ್ಥಾನ ಪಡೆದಿತ್ತು. ಉತ್ತರ ಪ್ರದೇಶ, ಮೊದಲು, ತಮಿಳುನಾಡು ದ್ವೀತಿಯ ಹಾಗೂ ಮಹಾರಾಷ್ಟ್ರ ಮೂರನೇ ಸ್ಥಾನದಲ್ಲಿತ್ತು. ಅಂದರೆ ರಾಜ್ಯದಲ್ಲಿ ಪ್ರತಿನಿತ್ಯ ಸುಮಾರು 120 ಅಪಘಾತಗಳು ನಡೆದು, ಸರಾಸರಿ 29 ಮಂದಿ ಮರಣ ಹೊಂದುತ್ತಿದ್ದಾರೆ.
2016 ರ ಮೇ ತಿಂಗಳಲ್ಲಿ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆ ಅಪಘಾತಗಳು ಸಂಭವಿಸಿವೆ. ಮೇ ನಲ್ಲಿ 4,077 ಹಾಗೂ ಜನವರಿಯಲ್ಲಿ 3,970 ಹಾಗೂ ಡಿಸೆಂಬರ್ ನಲ್ಲಿ 3,841 ಅಪಘಾತಗಳು ಸಂಭವಿಸಿವೆ,
ಇನ್ನೂ 89 ನಗರಗಳಲ್ಲಿ ಬೆಂಗಳರು ಅಪಘಾತ ಸಂಖ್ಯೆಯಲ್ಲಿ ಮೂರನೇ ಸ್ಥಾನದಲ್ಲಿದೆ. ಚೆನ್ನೈ, ದೆಹಲಿ ನಂತರದ ಸ್ಥಾನ ಸಿಲಿಕಾನ್ ಸಿಟಿಯದ್ದಾಗಿದೆ ಎಂದು ವರದಿ ತಿಳಿಸಿದೆ.
Advertisement