ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮೇಲೆ ಮಾಯಕೊಂಡ ಶಾಸಕ ನಿಂದಿಸಿ, ಹಲ್ಲೆ ಮಾಡಲು ಯತ್ನಿಸಿರುವ ಘಟನೆ ನಡೆದಿದೆ.
ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ. ಶಿವಮೂರ್ತಿ ನಾಯ್ಕ್ ಅವರು ಪ್ರಾಥಮಿಕ ಶಿಕ್ಷಣ ಇಲಾಖೆ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದು, ಅಧಿಕಾರಿಗಳಿಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಸಚಿವ ತನ್ವೀರ್ ಸೇಠ್ ಹಾಗೂ ಐಎಎಸ್ ಅಧಿಕಾರಿಗಳ ಸಂಘ ಮುಖ್ಯಮಂತ್ರಿಗೆ ದೂರು ನೀಡಿದ್ದಾರೆ.
ಈ ಸಂಬಂಧ ಸಿಎಂ ಸಿದ್ದರಾಮಯ್ಯರಿಗೆ ಪತ್ರ ಬರೆದಿರುವ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಅಜಯ್ ಸೇಥ್ ವಿಧಾನಮಂಡಲದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷರೂ ಆಗಿರುವ ಕೆ. ಶಿವಮೂರ್ತಿ ನಾಯ್ಕ್ ಇದೇ 27ರಂದು ಬೆಳಿಗ್ಗೆ 11ಗಂಟೆಗೆ ನನ್ನ ಕಚೇರಿಗೆ ಬಂದಿದ್ದರು. ಅವರು ಅಧ್ಯಕ್ಷರಾಗಿರುವ ಚಿತ್ರದುರ್ಗ ಜಿಲ್ಲೆಯ ಬಂಜಾರ ಯುವಕ ಸಂಘದ 4 ಪ್ರೌಢಶಾಲೆ ಮತ್ತು 1 ಪದವಿಪೂರ್ವ ಕಾಲೇಜು ಅನ್ನು ವೇತನಾನುದಾನಕ್ಕೆ ಒಳಪಡಿಸಬೇಕು ಎಂದು ಆಗ್ರಹಿಸಿದರು ಎಂದು ತಿಳಿಸಿದ್ದಾರೆ.
ಇಲಾಖೆಯಲ್ಲಿರುವ ದಾಖಲೆಗಳ ಪ್ರಕಾರ ಶಾಲೆಗಳು ನಡೆಯುತ್ತಿದ್ದಾಗಲೇ ಮಕ್ಕಳ ಹಾಜರಾತಿ ಇರಲಿಲ್ಲ. ಈ ಶಾಲೆಗಳು ಮುಚ್ಚಿ ಹೋಗಿ ಹಲವು ವರ್ಷಗಳೇ ಕಳೆದಿದೆ. ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸಲು ಅವಕಾಶ ಇಲ್ಲ ಎಂದು ಅವರಿಗೆ ವಿವರಿಸಿದೆ. ಆದರೆ, ಅದನ್ನು ಕೇಳಿಸಿಕೊಳ್ಳಲು ತಯಾರಿಲ್ಲದ ನಾಯ್ಕ್ ಅನಗತ್ಯವಾಗಿ ರಾದ್ದಾಂತ ನಡೆಸಿದರು ಪತ್ರದಲ್ಲಿ ಬರೆದಿದ್ದಾರೆ.
Advertisement