ಪ್ರಮುಖವಾಗಿ ನನ್ನನ್ನು ಟಾರ್ಗೆಟ್ ಮಾಡಲಾಗಿದೆ, ನಿಯಮಗಳು ಎಲ್ಲರಿಗೂ ಅನ್ವಯಿಸಬೇಕು: ಡಿಐಜಿ ರೂಪಾ

ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಿಶಿಕಲಾ ನಟರಾಜನ್ ಇರುವ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿನ ಅಕ್ರಮ ಚಟುವಟಿಕೆಗಳ ಬಗ್ಗೆ ...
ಡಿಐಜಿ ರೂಪಾ
ಡಿಐಜಿ ರೂಪಾ
ಬೆಂಗಳೂರು: ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಿಶಿಕಲಾ ನಟರಾಜನ್ ಇರುವ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿನ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಕಾರಣಕ್ಕೆ ಗೃಹ ಇಲಾಖೆ ನೋಟೀಸ್ ನೀಡಿರುವ ಸಂಬಂಧ ಪ್ರತಿಕ್ರಿಯಿಸಿರುವ ಬಂಧಿಖಾನೆ ಡಿಐಜಿ ಡಿ. ರೂಪಾ ನಾನು ಮಾಧ್ಯಮಗಳಿಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಹೇಳಿದ್ದಾರೆ.
ಯಾವುದೇ ರೀತಿಯ ತನಿಖೆಗೆ ಸಿದ್ಧ ಎಂದು ಹೇಳಿರುವ ಅವರು ಜೈಲಿನಲ್ಲಿ ಪ್ರತಿಭಟನೆ ನಡೆಸಿದವರು ಯಾರು, ಹಾಗೂ ಇತರ ಫೋಟೋ ಮತ್ತು ಮಾಹಿತಿಗಳನ್ನ ಮಾಧ್ಯಮದವರಿಗೆ ನೀಡಿದವರು ಯಾರು ಎಂದು ಪ್ರಶ್ನಿಸಿದ್ದಾರೆ. ಗುರುವಾರ ಕೆಲವು ಐಪಿಎಸ್ ಅಧಿಕಾರಿಗಳು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ, ಅವರಿಗೆ ಏಕೆ ನೊಟೀಸ್ ನೀಡಿಲ್ಲ, ಇಲಾಖೆ ನಿಯಮಗಳು ಎಲ್ಲರಿಗೂ ಒಂದೇ ರೀತಿಯಾಗಿ ಅನ್ವಯಿಸಬೇಕಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಡಿಜಿಪಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ ನಂತರವಷ್ಟೇ ನಾನು ಪ್ರತಿಕ್ರಿಯಿಸಿದ್ದೇನೆ, ಆದರೆ ನನ್ನನ್ನೇ ಪ್ರಮುಖವಾಗಿ ಟಾರ್ಗೆಟ್ ಮಾಡಲಾಗಿದೆ.  ಜೈಲಿನಲ್ಲಿರುವ ಯಾವುದೇ ಖೈದಿ ಬಗ್ಗೆ ಪಕ್ಷಪಾತ ತೋರಿಲ್ಲ ಅಥವಾ  ಕೆಟ್ಟ ಅಭಿಪ್ರಾಯವನ್ನು ಹೊಂದಿಲ್ಲ, ಜೈಲಿನಲ್ಲಿ ನಾನು ಏನು ನೋಡಿದ್ದೇನೋ ಅದನ್ನು ಮಾತ್ರ ವರದಿಯಲ್ಲಿ  ಉಲ್ಲೇಖಿಸಿದ್ದೇನೆ, ಇದರ ಹಿಂದೆ ಬೇರೆ ಯಾವುದೇ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನೂ ಬಂಧಿಖಾನೆ ಇಲಾಖೆಯ ಎಐಜಿಪಿ, ಜಿ ವೀರಭದ್ರಸ್ವಾಮಿ ಶುಕ್ರವಾರ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಡಿಐಜಿ ರೂಪಾ ಕಾರಾಗೃಹದಲ್ಲಿ ನಡೆಯುತ್ತಿರುವ ಅವ್ಯವಹಾರಗಳ ವಿರುದ್ಧ ವರದಿ ಸಲ್ಲಿಕೆ ಹಿನ್ನೆಲೆಯಲ್ಲಿ ವೀರಭದ್ರಸ್ವಾಮಿ, ಬೆಳಗ್ಗೆ 10.30 ರ ಸುಮಾರಿಗೆ ಆಗಮಿಸಿ, ಮಹಿಳೆಯರು ಮತ್ತಪ ವಿಐಪಿಗಳ ಬ್ಯಾರಕ್ ಗಳನ್ನು ಪರಿಶೀಲಿಸಿದರು. ರೂಪಾ ಅವರ ಆರೋಪ ಹಿನ್ನೆಲೆಯಲ್ಲಿ ಜೈಲಿನ ಕಿರಿಯ ಮತ್ತು ಹಿರಿಯ  ಸಿಬ್ಬಂದಿಗಳ ಹೇಳಿಕೆಗಳನ್ನು ಪಡೆದಿದ್ದಾರೆ. ಆದರೆ ಅವರು ಮಾಧ್ಯಮಗಳ ಜೊತೆ ಮಾತನಾಡಲು ನಿರಾಕರಿಸಿದರು.
ಸಂಜೆ 4.30 ರವರೆಗೆ ಜೈಲಿನಲ್ಲಿ  ವೀರಭದ್ರ ಸ್ವಾಮಿ ಪರಿಶೀಲನೆ ನಡೆಸಿದರು. ಜೈಲಿನ ಸೂಪರಿಂಡೆಂಟ್ ಮತ್ತು ವಾರ್ಡನ್ ಗಳಿಂದ ಹೇಳಿಕೆ ಪಡೆದರು. ಅಡುಗೆ ಮನೆ, ಎಐಎಡಿಎಂಕೆ ನಾಯಕಿ ಶಶಿಕಲಾ ಗೆ ನೀಡಿರುವ ವಿಶೇಷ ಸವಲತ್ತುಗಳನ್ನು ನೀಡಲಾಗಿದೆ ಎಂಬ ಆರೋಪ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದರು. ಅವರು ತೆರಳಿದ ನಂತರ ತೆಲಗಿ ಮತ್ತು ಶಶಿಕಲಾ ಅವರನ್ನು ಕಾಮನ್ ಬ್ಯಾರಕ್ ಗಳಿಗೆ ಶಿಫ್ಟ್ ಮಾಡಲಾಗಿದೆ ಎಂದು ಜೈಲಿನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com