11 ವರ್ಷ ಕಳೆದರೂ ಡಾ. ರಾಜ್ ಸ್ಮಾರಕ ನಿರ್ಮಾಣಕ್ಕೆ ಸರ್ಕಾರದಿಂದ ಇನ್ನೂ ಮಂಜೂರಾಗಿಲ್ಲ ಹಣ, ಭೂಮಿ!

ವರನಟ ಡಾ.ರಾಜ್ ಕುಮಾರ್ ನಿಧನರಾಗಿ 11 ವರ್ಷ ಕಳೆದಿದ್ದರೂ ಸರ್ಕಾರ ಭರವಸೆ ನೀಡಿದ್ದ ಎರಡೂವರೆ ಎಕರೆ ಜಮೀನು ಮತ್ತು ಸ್ಮಾರಕ ನಿರ್ಮಾಣಕ್ಕೆ...
ಡಾ.ರಾಜ್ ಕುಮಾರ್ ಸಮಾಧಿ
ಡಾ.ರಾಜ್ ಕುಮಾರ್ ಸಮಾಧಿ
ಬೆಂಗಳೂರು: ನಿರ್ಮಾಪಕಿ ಹಾಗೂ ಕನ್ನಡ ಚಿತ್ರರಂಗದ ಮೇರುನಟ ಡಾ.ರಾಜ್ ಕುಮಾರ್ ಪತ್ನಿ ಪಾರ್ವತಮ್ಮ ತಮ್ಮ ಪತಿಯ ಸಮಾಧಿ ಬಳಿ ಚಿರನಿದ್ರೆಗೆ ಜಾರಿದ್ದಾರೆ. 
ಆದರೆ ವರನಟ ಡಾ.ರಾಜ್ ಕುಮಾರ್ ನಿಧನರಾಗಿ 11 ವರ್ಷ ಕಳೆದಿದ್ದರೂ ಸರ್ಕಾರ ಭರವಸೆ ನೀಡಿದ್ದ ಎರಡೂವರೆ ಎಕರೆ ಜಮೀನು ಮತ್ತು ಸ್ಮಾರಕ ನಿರ್ಮಾಣಕ್ಕೆ 16.25 ಕೋಟಿ ರು. ಹಣವನ್ನು ಇನ್ನೂ ನೀಡಿಲ್ಲ.
ಬುಧವಾರ ಬೆಳಗ್ಗೆ ಪಾರ್ವತಮ್ಮ ನಿಧನರಾದ ನಂತರ ಎರಡನೇ ಯೋಚನೆ ಮಾಡದೇ ರಾಜ್ ಸಮಾಧಿ ಪಕ್ಕ ಅವರ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಯಿತು.  ಆದರೆ 2006 ರಲ್ಲಿ ಡಾ.ರಾಜ್ ಕುಮಾರ್ ನಿಧನರಾದಾಗ ಅಂತ್ಯಕ್ರಿಯೆ ಸಂಬಂಧ ಹಲವು ಗೊಂದಲಗಳು ಏರ್ಪಟ್ಟಿದ್ದವು. ಅಂತಿಮವಾಗಿ ನಂದಿನಿ ಲೇಔಟ್ ನ ಕಂಠೀರವ ಸ್ಟುಡಿಯೋದಲ್ಲಿ ಸಮಾಧಿ ಮಾಡಲು ನಿರ್ಧರಿಸಲಾಯಿತು. 
ಅಂದು ಮುಖ್ಯಮಂತ್ರಿಯಾಗಿದ್ದ ಎಚ್.ಡಿ ಕುಮಾರಸ್ವಾಮಿ, ಸರ್ಕಾರದಿಂದ ಎರಡೂವರೆ ಎಕರೇ ಜಮೀನು ಹಾಗೂ ಡಾ.ರಾಜ್ ಸ್ಮಾರಕ ನಿರ್ಮಾಣಕ್ಕೆ 16.25 ಕೋಟಿ ಹಣ ನೀಡುವುದಾಗಿ ಘೋಷಿಸಿದರು. ಇದನ್ನು ಸಂಪುಟ ಸಭೆಯಲ್ಲಿ ಅನುಮೋದಿಸಲಾಯಿತು.  ಇದಕ್ಕಾಗಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಟ್ರಸ್ಟ್ ಕೂಡ ರಚನೆಯಾಯಿತು ಎಂದು ಟ್ರಸ್ಟ್ ನ ಸದಸ್ಯ ಕಾರ್ಯದರ್ಶಿ ಶಂಕರಪ್ಪ ಹೇಳಿದ್ದಾರೆ.
ರಾಜ್ಯ ಸರ್ಕಾರಕ್ಕೆ ಈ ಸಂಬಂಧ ಹಲವು ಬಾರಿ ಪತ್ರ ಬರೆಯಲಾಗಿದೆ. ಸದ್ಯ ಈ ವಿಷಯ ಹಣಕಾಸು ಇಲಾಖೆಯಲ್ಲಿದ್ದು, ಅನುಮೋದನೆ ನೀಡಬೇಕಿದೆ, ರಾಮೋಜಿ ರಾವ್ ಫಿಲ್ಮ್ ಸಿಟಿಯಂತೆ ಕಂಠೀರವ ಸ್ಟುಡಿಯೋದಲ್ಲಿ ಫಿಲ್ಮ್ ಸಿಟಿ ನಿರ್ಮಾಣ ಮಾಡಲು ಅವರು ಯೋಜನೆ ನಡೆಸುತ್ತಿದ್ದಾರೆ ಎಂದು ಶಂಕರಪ್ಪ ತಿಳಿಸಿದ್ದಾರೆ.
ಕಂಠೀರವ ಸ್ಟುಡಿಯೋ ಮತ್ತು ರಾಜ್ ಕುಮಾರ್ ಸಮಾಧಿ ರಾಜ್ಯ ಸರ್ಕಾರದ ಅಧೀನಕ್ಕೊಳಪಡುತ್ತದೆ, ಯಾರೋಬ್ಬರು ಇದನ್ನು ಪ್ರಶ್ನಿಸಲು ಸಾಧ್ಯವಿಲ್ಲ, ಇದನ್ನು ದೊಡ್ಡ ವಿಷಯವನ್ನಾಗಿಸುವ ಅವಶ್ಯಕತೆಯೂ ಇಲ್ಲ, ಹಣ ಬಿಡುಗಡೆ ಮಾಡಲು ಕೆಲವೊಂದು ಸಣ್ಣಪುಟ್ಟ ಸಮಸ್ಯೆಗಳಿರಬಹುದು , ಶೀಘ್ರವೇ ಅದು ಬಗೆಹರಿಯಲಿದೆ ಎಂದು ಮಾಹಿತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ. ಲಕ್ಷ್ಮಿ ನಾರಾಯಣ ಹೇಳಿದ್ದಾರೆ.
1966 ರಲ್ಲಿ ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಕಂಠೀರವ ಸ್ಟುಡಿಯೋ ನಿರ್ಮಿಸಲಾಯಿತು. ಕನ್ನಡ ಸಿನಿಮಾಗಳ ಚಿತ್ರೀಕರಣಕ್ಕಾಗಿ ನಂದಿನಿ ಲೇಔಟ್ ನ 18 ಎಕರೆ ಜಮೀನಿನಲ್ಲಿ ಕಂಠೀರವ ಸ್ಟುಡಿಯೋ ಇದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com