ಬೆಂಗಳೂರು: ರಾಜ್ಯದ ಸುಮಾರು ರೈತರು ಸರ್ಕಾರ ನೀಡುವ ಸಬ್ಸಿಡಿ ಹಣವನ್ನು ದುರುಪಯೋಗ ಮಾಡಿಕೊಂಡಿದ್ದು, ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ವಿಧಾನ ಪರಿಷತ್ತಿನಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ನ ಎಚ್.ಎಂ.ರೇವಣ್ಣ ಪ್ರಶ್ನೆಗೆ ಉತ್ತರಿಸಿದ ಅವರು ಸುಮಾರು 200 ರೈತರು ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂದರು.
ಕೃಷಿ ಭಾಗ್ಯ ಯೋಜನೆಯ ಶೆಡ್ನೆಟ್ ಮತ್ತು ಪಾಲಿಹೌಸ್ ಅಳವಡಿಕೆಯಲ್ಲಿ ಕಳಪೆ ದರ್ಜೆಯ ಸಾಮಾಗ್ರಿ ಬಳಸಿ ಅಧಿಕ ಬಿಲ್ ನೀಡಿದ್ದಾರೆ ಎಂದು ಸಚಿವರು ಹೇಳಿದರು.
ರಾಷ್ಟ್ರೀಯ ತೋಟಗಾರಿಕೆ ಮಿಷನ್ ಈ ಸೌಲಭ್ಯಗಳ ಅಳವಡಿಕೆಗೆ ಎಕರೆಗೆ ರು 27 ಲಕ್ಷ ನಿಗದಿ ಮಾಡಿತ್ತು. ಆ ಬಳಿಕ ಶೆಡ್ನೆಟ್ ಮತ್ತು ಪಾಲಿಹೌಸ್ಗಳ ನಿರ್ಮಾಣಕ್ಕೆ ಬಳಸುವ ಸಾಮಾಗ್ರಿಗಳ ವೆಚ್ಚ ಕಡಿಮೆ ಆಯಿತು.
ಆದರೆ, ರೈತರು ಕಳಪೆ ದರ್ಜೆಯ ಸಾಧನ ಅಳವಡಿಸಿ ರು 27 ಲಕ್ಷಕ್ಕೆ ಬಿಲ್ ನೀಡಿ ಹಣ ಪಡೆದಿದ್ದರು. ಈ ಪ್ರಕರಣದಲ್ಲಿ ಅಧಿಕಾರಿಗಳು ಶಾಮೀಲಾಗಿದ್ದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಕ್ಲೋಸ್ಡ್ ಟೋಲ್ ನೀತಿ ಜಾರಿಗೆ ಚಿಂತನೆ
ಬಳಕೆದಾರರು ಪ್ರಯಾಣಿಸಿದ ದೂರಕ್ಕೆ ಮಾತ್ರ ಟೋಲ್ ಪಾವತಕಿಸುವ ಕ್ಲೋಸ್ಡ್ ಟೋನ್ ನೀತಿ ರಾಜ್ಯದಲ್ಲೂ ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂದು ಲೋಕೋಪಯೋಗಿ ಸಚಿವ ಮಹಾದೇವಪ್ಪ ಹೇಳಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಸದಸ್ಯೆ ತಾರಾ ಅನುರಾಧ ಪ್ರಶ್ನೆಗೆ ಉತ್ತರಿಸಿದ ಅವರು, ಭೂಸಾರಿ ಮತ್ತು ಹೆದ್ದಾರಿ ಸಚಿವಾಲಯ ಕ್ಲೋಸ್ಡ್ ಟೋಲ್ ನೀತಿ ಜಾರಿಗೊಳಿಸುವ ಚಿಂತನೆ ನಡೆಸಿದೆ, ಕೇಂದ್ರ ಈ ನೀತಿಯನ್ನು ಜಾರಿ ಮಾಡಿದ ತಕ್ಷಣವೇ ರಾಜ್ಯದಲ್ಲೂ ಜಾರಿಗೆ ತರಲಾಗುವುದು ಎಂದರು.