ಬೆಂಗಳೂರು: ರಾಜ್ಯದ 1 ಸಾವಿರ ಪೌರ ಕಾರ್ಮಿಕರಿಗೆ ವಿದೇಶ ಪ್ರವಾಸದ ಭಾಗ್ಯ ಸಿಕ್ಕಿದ್ದು, ತರಬೇತಿಗಾಗಿ 1000 ಪೌರ ಕಾರ್ಮಿಕರನ್ನು ಜುಲೈ ತಿಂಗಳಿನಲ್ಲಿ ಸಿಂಗಾಪುರಕ್ಕೆ ಕರೆದೊಯ್ಯಲಾಗುವುದು ಎಂದು ಶನಿವಾರ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅವರು ಹೇಳಿದ್ದಾರೆ.
ಸಿಂಗಾಪುರದಲ್ಲಿ ಅತ್ಯಾಧುನಿಕ ಮಾದರಿಯಲ್ಲಿ ಯಂತ್ರಗಳ ಮೂಲಕ ಮ್ಯಾನ್ ಹೋಲ್ಗಳ ಸ್ವಚ್ಛತೆ ಕೈಗೊಳ್ಳಲಾಗುತ್ತದೆ. ಆ ಬಗ್ಗೆ ಅಧ್ಯಯನ ಮತ್ತು ತರಬೇತಿಗಾಗಿ ಪೌರ ಕಾರ್ಮಿಕರನ್ನು ಕರೆದೊಯ್ಯಲಾಗುತ್ತಿದೆ ಎಂದು ಆಂಜನೇಯ ತಿಳಿಸಿದ್ದಾರೆ.
ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ ವಿದೇಶಿ ಪ್ರವಾಸಕ್ಕೆ ಪೌರ ಕಾರ್ಮಿಕರನ್ನು ಆಯ್ಕೆ ಮಾಡಲಾಗಿದೆ. ಇವರ ಜೊತೆ ಅಧಿಕಾರಿಗಳು ಹಾಗೂ ಕೆಲ ಪೌರಕಾರ್ಮಿಕ ಸಂಘಟನೆ ಮುಖಂಡರುಗಳು ಸಹ ವಿದೇಶ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಸಚಿವರು ಹೇಳಿದ್ದಾರೆ.
ತಂತ್ರಜ್ಞಾನ ಎಷ್ಟೇ ಮುಂದುವರೆದಿದ್ದರೂ ಪೌರ ಕಾರ್ಮಿಕರು ಮ್ಯಾನ್ಹೋಲ್ಗಳನ್ನು ಸ್ವಚ್ಛಗೊಳಿಸುವಾಗ ದುರಂತಗಳು ಮರುಕಳಿಸುತ್ತಿವೆ. ಹಲವಾರು ಕಾರ್ಮಿಕರು ಮ್ಯಾನ್ಹೋಲ್ಗಳಲ್ಲಿ ಪ್ರಾಣ ಕಳೆದುಕೊಂಡ ಘಟನೆಗಳು ನಡೆದಿವೆ. ಇವಕ್ಕೆಲ್ಲ ಕೊನೆ ಹಾಡಿ ವಿದೇಶಗಳಲ್ಲಿ ಬಳಸುತ್ತಿರುವ ತಂತ್ರಜ್ಞಾನ ರಾಜ್ಯದಲ್ಲೂ ಅಳವಡಿಸಲು ಈ ಪೌರಕಾರ್ಮಿಕರ ಪ್ರವಾಸವನ್ನು ಆಯೋಜಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ತೊರೆದಿರುವ ಮಾಜಿ ಸಂಸದ ಎಚ್ ವಿಶ್ವನಾಥ್ ಅವರಿಗೆ ತಿರುಗೇಟು ನೀಡಿದ ಆಂಜನೇಯ ಮುಖ್ಯಮಂತ್ರಿ ಸಿದ್ದರಾಮಯ್ಯ ದುಶ್ಯಾಸನ ಅಲ್ಲ, ಅವರು ರಾಮ ನಾನು ಅವರ ಸೇವಕ ಆಂಜನೇಯ ಎಂದರು.