ಮೈಸೂರು: ಇತ್ತೀಚೆಗೆ ನಗರದ ಕಲಾಮಂದಿರಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಂಸಹಾರ ವಿತರಿಸಿದ ಘಟನೆ ಸಂಬಂಧ ಪ್ರಗತಿಪರ ಸಂಘಗಳ ಒಕ್ಕೂಟ ಕ್ಷಮೆ ಯಾಚಿಸಿದೆ.
ಘಟನೆ ಖಂಡಿಸಿರುವ ಬಿಜೆಪಿ ದೇಶಾದ್ಯಂತ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ ಬೆನ್ನಲ್ಲೆ ಒಕ್ಕೂಟದ ಸದಸ್ಯ ಹಾಗೂ ಮೈಸೂರಿನ ಮಾಜಿ ಮೇಯರ್ ಪುರುಷೋತ್ತಮ್ ಗೊತ್ತಿಲ್ಲದೇ ತಪ್ಪು ನಡೆಯಿತು ಎಂದು ಕ್ಷಮೆಯಾಚಿಸಿದ್ದಾರೆ.
ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಪುರುಷೋತ್ತಮ್, ಕಲಾಮಂದಿರಲ್ಲಿ ಬೇರೆ ಮಾಂಸಹಾರ ವಿತರಣೆ ಕೂಡ ಮಾಡಲಾಗಿತ್ತು, ಆದರೆ ಕೇವಲ ಗೋಮಾಂಸ ಸೇವನೆ ವಿಷಯವನ್ನು ಮಾತ್ರ ವಿಜೃಂಭಿಸಲಾಗುತ್ತಿದೆ. ಕೇವಲ ಹಸು ಮಾತ್ರವಲ್ಲ ಎಲ್ಲಾ ಪ್ರಾಣಿಗಳಿಗೂ ಜೀವಿಸುವ ಹಕ್ಕಿದೆ ಎಂದು ಹೇಳಿದ್ದಾರೆ.
ಹಿಂದೂ ಸಂಘಟನೆಗಳು ಅನುಮತಿಯಿಲ್ಲದೇ ಕಲಾಮಂದಿರಕ್ಕೆ ತೆರಳಿ ಗೋಮೂತ್ರ ಸಿಂಪಡಿಸಿದ್ದಾರೆ, ಇದೊಂದು ಅಸಂವಿಧಾನಿಕವಾಗಿದೆ. ನಾವು ಈ ಸಂಬಂಧ ಜಯಲಕ್ಷ್ಮಿಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ ಎಂದು ಹೇಳಿದ್ದಾರೆ.
ಬಿಜೆಪಿ ಮುಖಂಡರಾದ ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಮತ್ತು ಪ್ರತಾಪ್ ಸಿಂಹ ಪ್ರಕರಣವನ್ನು ಅತಿಶಯೋಕ್ತಿಯಾಗಿ ಬಿಂಬಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಚಾರ್ವಿಕ ಸಂಘಟನೆ ಮೈಸೂರು ಕಲಾ ಮಂದಿರದಲ್ಲಿ ಆಹಾರ ಕ್ರಮದ ಬಗ್ಗೆ ಸೆಮಿನಾರ್ ಹಮ್ಮಿಕೊಂಡಿತ್ತು. ಮೂರು ದಿನಗಳ ಕಾಲ ನಡೆದ ಈ ಸೆಮಿನಾರ್ನಲ್ಲಿ ಭಾಗವಹಿಸಿದ್ದವರು ಗೋಮಾಂಸ ಸೇವಿಸಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಗಿತ್ತು. ಇದರಿಂದಾಗಿ ಉದ್ವಿಗ್ನ ವಾತಾವರಣ ನಿರ್ಮಾಣ ಮಾಡಲಾಗಿತ್ತು.