ಮೈಸೂರು: ಶತಮಾನದಷ್ಟು ಹಿಂದಿನ ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯ ಮಾರ್ಚ್ 15 ರಿಂದ 18 ತಿಂಗಳ ಕಾಲ ಬಂದ್ ಆಗಲಿದೆ.
ಪುರಾತತ್ವ ಇಲಾಖೆ ದೇವಾಲಯದ ನವೀಕರಣ ಕಾರ್ಯ ಕೈಗೊಳ್ಳುವ ಹಿನ್ನೆಲೆಯಲ್ಲಿ 18 ತಿಂಗಳ ಕಾಲ ಸಾರ್ವಜನಿಕರಿಗೆ ದೇವಾಲಯಕ್ಕೆ ಪ್ರವೇಶವಿರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಬಿ.ಆರ್ ಹಿಲ್ಸ್ ಪ್ರಸಿದ್ಧ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ.
ಸಂಕ್ರಾಂತಿ ವೇಳೆ ನಡೆಯುವ ಚಿಕ್ಕಜಾತ್ರೆ ಮತ್ತು ಉತ್ಸವದ ವೇಳೆ ಸುಮಾರು 30 ಸಾವಿರ ಮಂದಿ ಭಾಗವಹಿಸಿದ್ದರು. ಏಪ್ರಿಲ್ ವೇಳೆ ನಡೆಯುವ ದೊಡ್ಡ ಜಾತ್ರೆ ಸಮಯದಲ್ಲಿ ಲಕ್ಷಾಂತರ ಮಂದಿ ಭಾಗವಹಿಸುತ್ತಾರೆ.
ಪ್ರತಿ ವಾರಾಂತ್ಯ ಸುಮಾರು 5 ರಿಂದ 8 ಸಾವಿರ ಮಂದಿ ಈ ಪ್ರವಾಸಿ ಸ್ಥಳಕ್ಕೆ ಆಗಮಿಸುತ್ತಾರೆ. ಇಲ್ಲಿಗೆ ಬರುವ ಭಕ್ತಾದಿಗಳಿಗೆ ಪ್ರತಿನಿತ್ಯ ಅನ್ನ ಸಂತರ್ಪಣೆ ಏರ್ಪಡಿಸಲಾಗುತ್ತದೆ.
ಹಾನಿಗೊಳಗಾಗಿರುವ ದೇವಾಲಯದ ಭಾಗಗಳನ್ನು ಮೂಲ ವಾಸ್ತು ಶಿಲ್ಪಕ್ಕೆ ಯಾವುದೇ ರೀತಿಯ ಕುಂದುಂಟಾಗದಂತೆ ನವೀಕರಣ ಕಾರ್ಯ ಮಾಡಲು ಪುರಾತತ್ವ ಇಲಾಖೆ ನಿರ್ಧರಿಸಿದೆ.
ಸಂತ ವಶಿಷ್ಟರ ಕಾಲದ ಪುರಾತನ ದೇವಾಲಯದಲ್ಲಿ ಮಳೆಗಾಲದಲ್ಲಿ ಉಂಟಾಗುವ ಸೋರಿಕೆಯಿಂದಾಗಿ ಕೆಲವು ಗೋಡೆಗಳು ಶಿಥಿಲಗೊಂಡಿವೆ. ಹೀಗಾಗಿ ಕೂಡಲೇ ನವೀಕರಣ ಕಾರ್ಯ ಆರಂಭಿಸಬೇಕೆಂದು ಪುರಾತತ್ವ ಇಲಾಖೆ ಹೇಳಿದೆ.
ಮೊದಲ ಬಾರಿಗೆ ದೇವಾಲಯದ ನವೀಕರಣ ಕಾರ್ಯ ಕೈಗೊಳ್ಳಲಾಗುತ್ತಿದ್ದು, ಮಾರ್ಚ್ 15 ರಿಂದ ದೇವಾಸ್ಠಾನ ಮುಚ್ಚಲಿದೆ, ನಿಗದಿ ಪಡಿಸಿರುವ ಅವಧಿಯೊಳಗೆ ನವೀಕರಣ ಕಾರ್ಯ ಪೂರ್ಣಗೊಳ್ಳಲಿದೆ ಎಂದು ದೇವಾಲಯದ ಕಾರ್ಯಕಾರಿ ಅಧಿಕಾರಿ ವೆಂಕಟೇಶ್ ಪ್ರಸಾದ್ ಹೇಳಿದ್ದಾರೆ.
Advertisement