
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಸದಸ್ಯೆ ಮಂಗಳಾ ಶ್ರೀಧರ್ ಅವರ ಅಮಾನತು ಆದೇಶವನ್ನು ಹೈಕೋರ್ಟ್ ವಜಾ ಮಾಡಿದೆ. ಈ ಸಂಬಂಧ ರಾಜ್ಯಪಾಲರ ಆದೇಶ ಸಂವಿಧಾನಬಾಹಿರ ಎಂದು ಅಭಿಪ್ರಾಯಪಟ್ಟಿದೆ.
2014ರಲ್ಲಿ ರಾಜ್ಯಪಾಲರ ಕ್ರಮ ಎತ್ತಿಹಿಡಿದಿದ್ದ ಏಕಸದಸ್ಯ ಪೀಠದ ಕ್ರಮ ಪ್ರಶ್ನಿಸಿ ಮಂಗಳಾ ಶ್ರೀಧರ್ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆಯ ತೀರ್ಪು ನೀಡಿದ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಹಾಗೂ ನ್ಯಾಯಮೂರ್ತಿ ಆರ್.ಬಿ.ಬೂದಿಹಾಳ್ ಅವರಿದ್ದ ವಿಭಾಗೀಯ ಪೀಠ, ರಾಜ್ಯಪಾಲರ ಆದೇಶ ಹಾಗೂ ಏಕಸದಸ್ಯ ಪೀಠದ ತೀರ್ಪು ರದ್ದುಪಡಿಸಿ, ಮಂಗಳಾ ಶ್ರೀಧರ್ ತಮ್ಮ ಸ್ಥಾನದಲ್ಲಿ ಮುಂದುವರಿಯಲು ಅರ್ಹರಿದ್ದಾರೆ ಎಂದು ತಿಳಿಸಿದೆ.
ಕೆಪಿಎಸ್ಸಿ ಸದಸ್ಯೆಯಾಗಿದ್ದ ಮಂಗಳಾ ಶ್ರೀಧರ್ ಅವರು 2011ರ ಕೆಪಿಎಸ್ಸಿ ಗೆಜೆಟೆಡ್ ಪ್ರೊಬೆಷನರಿ ಎ ಮತ್ತು ಬಿ ವೃಂದದ 362 ಹುದ್ದೆಗಳ ನೇಮಕ ಪ್ರಕ್ರಿಯೆಯಲ್ಲಿ ಅಕ್ರಮ ಎಸಗಿದ್ದಾರೆ ಎಂದು ದೂರು ದಾಖಲಿಸಲಾಗಿತ್ತು. ಈ ದೂರಿಗೆ ಸಂಬಂಧಿಸಿದಂತೆ ಮಂಗಳಾ ಶ್ರೀಧರ್ ಅವರನ್ನು ಅಮಾನತುಗೊಳಿಸಿ ಅಂದಿನ ರಾಜ್ಯಪಾಲ ಹಂಸರಾಜ ಭಾರದ್ವಾಜ ಆದೇಶಿಸಿದ್ದರು.
ಕೆಪಿಎಸ್ಸಿ ಸದಸ್ಯ ಸ್ಥಾನದಿಂದ ಅಮಾನತುಗೊಳಿಸುವ ಅಧಿಕಾರ ರಾಜ್ಯಪಾಲರಿಗಿಲ್ಲ.ಅಲ್ಲದೆ ಅಮಾನತುಗೊಳಿಸುವ ಮುನ್ನ ಸಚಿವ ಸಂಪುಟದ ತೀರ್ಮಾನವೂ ನಡೆದಿರಲಿಲ್ಲ. ಜತೆಗೆ ಅಮಾನತುಗೊಳಿಸಿದ ಆದೇಶವನ್ನು ರಾಷ್ಟ್ರಪತಿಗೆಗೆ ಕಳುಹಿಸಿಕೊಡಬೇಕು, ಈ ಸಂಬಂಧ ರಾಷ್ಟ್ರಪತಿ ಸುಪ್ರೀಂಕೋರ್ಟ್ಗೆ ಶಿಫಾರಸು ಕಳುಹಿಸಿಕೊಡಬೇಕು. ಆದರೆ ಇದುವರೆಗೂ ಈ ಪ್ರಕ್ರಿಯೆಗಳು ಪಾಲನೆಯಾಗಿಲ್ಲ ಎಂದು ಅಭಿಪ್ರಾಯಪಟ್ಟ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.
Advertisement