ಮೈಸೂರು: ಕೌಟುಂಬಿಕ ಕಲಹದ ಬಗ್ಗೆ ವರದಿ ಮಾಡಿದ ಸ್ಥಳೀಯ ಮಾಧ್ಯಮಗಳು ಪುರುಷತ್ವ ಪ್ರಶ್ನಿಸಿದ ಹಿನ್ನೆಲೆಯಲ್ಲಿ ನೊಂದ ವ್ಯಕ್ತಿಯೊಬ್ಬ ನೀರಿನ ಟ್ಯಾಂಕರ್ ಏರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.
ಪೇಂಟರ್ ಕೆಲಸ ಮಾಡುವ ಅರುಣ್ ಕುಮಾರ್ ಎಂಬಾತ ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ನೀರಿನ ಟ್ಯಾಂಕ್ ಏರಿ ಕುಳಿತಿದ್ದ. ಸುಮಾರು 1 ಗಂಟೆ ಗಳ ಕಾಲ ನಡೆದ ಈ ಹೈಡ್ರಾಮಾಗೆ ಹಲವು ಮಂದಿ ಸಾಕ್ಷಿಯಾದರು.
30 ವರ್ಷದ ಕುಮಾರ್ 10 ವರ್ಶಗಳ ಹಿಂದೆ ವಿವಾಹವಾಗಿದ್ದರು. ಇಬ್ಬರ ನಡುವೆ ಹೊಂದಾಣಿಕೆಯಿಲ್ಲದ ಕಾರಣ ದಂಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಸೋಮವಾರ ತನ್ನ ಪತ್ನಿಯನ್ನು ಕುಮಾರ್ ಮನೆಯಿಂದ ಹೊರಗೆ ಹಾಕಿದ್ದ.
ನಂತರ ಈ ವಿಷಯ ಸ್ಥಳೀಯ ಚಾನೆಲ್ ಗಳಲ್ಲಿ ಪ್ರಸಾರವಾಗಿತ್ತು. ಕೌಟುಂಬಿಕ ಕಲಹದ ಬಗ್ಗೆ ವರದಿ ಪ್ರಸಾರ ಮಾಡಿದ ಚಾನೆಲ್ ಗಳು ಆತನನ್ನು ನಂಪುಂಸಕ ಎಂದು ವರದಿ ಮಾಡಿದ್ದವು. ಇದನ್ನು ನೋಡಿದ ಕುಮಾರ್ ಸ್ನೇಹಿತರು ಆತನಿಗೆ ಕರೆ ಮಾಡಿ ಕಿಚಾಯಿಸಿದ್ದರು, ಇದರಿಂದ ತೀವ್ರ ಖಿನ್ನತೆಗೊಳಗಾದ ಅರುಣ್ ಕುಮಾರ್ ನೀರಿನ ಟ್ಯಾಂಕ್ ಏರಿದ್ದ.
1 ಗಂಟೆಯ ನಂತರ ಪೊಲೀಸರು ಆತನನ್ನು ಸುರಕ್ಷಿತವಾಗಿ ಕೆಳಗಿಳಿಸಲು ಸಫಲವಾದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ನಾನು ಮದುವೆಯಾಗಿ 10 ವರ್ಷದಿಂದ ಸಂಸಾರ ಮಾಡಿಕೊಂಡು ಬಂದಿದ್ದೇನೆ. ಈಗ ಹೆಂಡತಿ ಹಾಗೂ ಮಾವ ನೀನು ಪುರುಷನೇ ಅಲ್ಲ ಎಂದು ಆರೋಪಿಸುತ್ತಿದ್ದಾರೆ. ಟಿವಿ ಚಾನೆಲ್ನಲ್ಲಿಯೂ ಈ ಬಗ್ಗೆ ಸುದ್ದಿ ಪ್ರಸಾರವಾಗಿದೆ. ಹಾಗಾಗಿ ಈ ವಿಷಯ ಸ್ನೇಹಿತರೆಲ್ಲರಿಗೂ ಗೊತ್ತಾಗಿದೆ. ಅವರೆಲ್ಲರೂ ಕರೆ ಮಾಡಿ ವಿಚಾರಿಸುತ್ತಿದ್ದಾರೆ. ಇದರಿಂದ ಮನನೊಂದು ಆತ್ಮಹತ್ಯೆಗೆ ಮುಂದಾದೆ ಎಂದು ತಮ್ಮ ಅಳಲು ತೋಡಿಕೊಂಡರು.
Advertisement