ರಾಜ್ಯ
ಬಿಡಿಎ ಹೊಸ ಆಯುಕ್ತರ ಮುಂದೆ ಸಾಲು ಸಾಲು ಸವಾಲು
ರಾಜ್ಯ ಸರ್ಕಾರ ಬಿಡಿಎ ಆಯುಕ್ತರಾಗಿದ್ದ ರಾಜ್ ಕುಮಾರ್ ಖತ್ರಿ ಅವರನ್ನು ವರ್ಗಾವಣೆಗೊಳಿಸಿ ಆ ಸ್ಥಾನಕ್ಕೆ ರಾಕೇಶ್ ಸಿಂಗ್ ಅವರನ್ನು ನೇಮಕ ಮಾಡಿದೆ.
ಬೆಂಗಳೂರು: ರಾಜ್ಯ ಸರ್ಕಾರ ಬಿಡಿಎ ಆಯುಕ್ತರಾಗಿದ್ದ ರಾಜ್ ಕುಮಾರ್ ಖತ್ರಿ ಅವರನ್ನು ವರ್ಗಾವಣೆಗೊಳಿಸಿ ಆ ಸ್ಥಾನಕ್ಕೆ ರಾಕೇಶ್ ಸಿಂಗ್ ಅವರನ್ನು ನೇಮಕ ಮಾಡಿದೆ.
ಜಲ ಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಕೇಶ್ ಸಿಂಗ್ ಅವರು ಈಗ ಬಿಡಿಎ ಆಯುಕ್ತರಾಗಿ ನೇಮಕಗೊಂಡಿದ್ದರೆ, ರಾಜ್ ಕುಮಾರ್ ಖತ್ರಿ ಅವರನ್ನು ಯುವ ಜನ ಸೇವೆ ಹಾಗೂ ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ. ಅರ್ಕಾವತಿ ಲೇಔಟ್ ಹಾಗೂ ಕೆಂಪೇಗೌಡ ಲೇಔಟ್ ಗಳ ಸಮಸ್ಯೆಗಳನ್ನು ಬಗೆಹರಿಸಿಲ್ಲ. ಜನಸಾಮಾನ್ಯರಿಗೆ ಸಹಾಯ ಮಾಡುತ್ತಿಲ್ಲ ಎಂಬ ಆರೋಪದ ಪರಿಣಾಮವಾಗಿ ರಾಜ್ ಕುಮಾರ್ ಖತ್ರಿ ಅವರ ವರ್ಗಾವಣೆಗೆ ಒತ್ತಡ ಹೆಚ್ಚಿತ್ತು. ರಾಜ್ ಕುಮಾರ್ ಖತ್ರಿ ಅವರನ್ನು ವರ್ಗಾವಣೆಗೊಳಿಸಲು ಯಶವಂತಪುರ ಶಾಸಕ ಎಸ್ ಟಿ ಸೋಮಶೇಖರ್ ನೇತೃತ್ವದ ನಿಯೋಗ ಜ.28 ರಂದೇ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿತ್ತಾದರೂ ಈಗ ರಾಜ್ ಕುಮಾರ್ ಖತ್ರಿ ಅವರನ್ನು ವರ್ಗಾವಣೆ ಮಾಡಲಾಗಿದೆ.
ಬಿಡಿಎಗೆ ಹೊಸ ಆಯುಕ್ತರಾಗಿ ಬಂದಿರುವ ರಾಕೇಶ್ ಸಿಂಗ್ ಅವರೆದುರು ಹಲವು ಸವಾಲುಗಳಿದ್ದು, ಬಿಡಿಎ ಮಾಸ್ಟರ್ ಪ್ಲಾನ್ 2031 ಇನ್ನಷ್ಟೇ ಸಿದ್ಧಗೊಳ್ಳಬೇಕಿದೆ. ಅಷ್ಟೇ ಅಲ್ಲದೇ ಅರ್ಕಾವತಿ ಲೇಔಟ್ ನಲ್ಲಿ ನಿವೇಶನ ಪಡೆದಿದ್ದ ಜನರು ಪರ್ಯಾಯ ವ್ಯವಸ್ಥೆ ಕಲ್ಪಿಸದೇ ಇದ್ದರೆ ಕೋರ್ಟ್ ಮೊರೆ ಹೋಗುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇದೆಲ್ಲದರ ನಡುವೆ ನಿವೇಶನ ಹಂಚಿಕೆಯಲ್ಲಿ ಅತಿ ಹೆಚ್ಚಿನ ಭ್ರಷ್ಟಾಚಾರದ ಆರೋಪಗಳೂ ಸಹ ಹೊಸ ಆಯುಕ್ತರಿಗೆ ಸವಾಲಿನ ಸಂಗತಿಯಾಗಿದೆ.