ರಾಜಕೀಯವನ್ನು ಅಧಿಕಾರಿಗಳಿಂದ ದೂರವಿರಿಸಿ: ಸಂಸದ ಪ್ರತಾಪ್ ಸಿಂಹಗೆ ಐಪಿಎಸ್ ಅಧಿಕಾರಿ ಟಾಂಗ್

ರಾಜ್ಯದ ಐಪಿಎಸ್ ಅಧಿಕಾರಿಗಳನ್ನು ಕೇಂದ್ರ ಸೇವೆಗೆ ವರ್ಗಾಯಿಸಿರುವ ಸರ್ಕಾರದ ಕ್ರಮಕ್ಕೆ ಸಂಸದ ಪ್ರತಾಪ್ ಸಿಂಹ ಆಕ್ಷೇಪ ವ್ಯಕ್ತ ...
ಪ್ರತಾಪ್ ಸಿಂಹ ಮತ್ತು ರೂಪಾ ಮೌದ್ಗೀಲ್
ಪ್ರತಾಪ್ ಸಿಂಹ ಮತ್ತು ರೂಪಾ ಮೌದ್ಗೀಲ್

ಬೆಂಗಳೂರು: ರಾಜ್ಯದ ಐಪಿಎಸ್ ಅಧಿಕಾರಿಗಳನ್ನು ಕೇಂದ್ರ ಸೇವೆಗೆ ವರ್ಗಾಯಿಸಿರುವ ಸರ್ಕಾರದ ಕ್ರಮಕ್ಕೆ ಸಂಸದ ಪ್ರತಾಪ್ ಸಿಂಹ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.

ಕರ್ನಾಟಕದಿಂದ ಕೇಂದ್ರ ಸೇವೆಗೆ ನಿಯೋಜನೆಗೊಂಡಿರುವ ಐಪಿಎಸ್ ಅಧಿಕಾರಿಗಳ ಗುಳೆ ಪರ್ವ ಆರಂಭವಾಗಿದೆ ಎಂದು ಪ್ರತಾಪ್ ಸಿಂಹ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿಕೊಂಡಿದ್ದರು. ಇದಕ್ಕೆ ಐಪಿಎಸ್ ಅಧಿಕಾರಿ ರೂಪಾ ಮೌದ್ಗೀಲ್ ಪ್ರತಿಕ್ರಿಯೆ ನೀಡಿದ್ದು, ಅಧಿಕಾರಿಗಳು ಅವರ ಕೆಲಸ ಮಾಡಲು ಬಿಡಿ, ರಾಜಕೀಯದಿಂದ ಅಧಿಕಾರಿಗಳನ್ನು ದೂರವಿರಿಸಿ ಎಂದು ಕುಟುಕಿದ್ದಾರೆ.

ಐಪಿಎಸ್ ಅದಿಕಾರಿ ಮಧುಕರ್ ಶೆಟ್ಟಿ. ರಾಜ್ಯದಲ್ಲಿ ಒಳ್ಳೆಯ ಪೋಸ್ಟಿಂಗ್ ನೀಡದ ಹಿನ್ನೆಲೆಯಲ್ಲಿ ಕೇಂದ್ರದ ಕದ ತಟ್ಟಿದ್ದಾರೆ. ಇದೀಗ ಕೇಂದ್ರ ತರಬೇತಿ ಐಜಿಯಾಗಿ ಮಧುಕರ್ ಶೆಟ್ಟಿ ನಿಯೋಜನೆಗೊಂಡಿದ್ದಾರೆ. ಖಡಕ್ ಮಹಿಳಾ ಅಧಿಕಾರಿ ಸೋನಿಯಾ ನಾರಂಗ್ ಅವರು ಲೋಕಾಯುಕ್ತದಲ್ಲಿ ನಡೆದಿದ್ದ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಬಯಲಿಗೆಳೆದಿದ್ದವರು.  ಏಪ್ರಿಲ್ 1ರಿಂದ ಕೇಂದ್ರ ಸೇವೆಗೆ ತೆರಳಲಿದ್ದಾರೆ. ಬೆಂಗಳೂರು ಉತ್ತರ ವಿಭಾಗದ ಡಿಸಿಪಿಯಾಗಿರೋ ಲಾಭೂರಾಮ್ ಕೇಂದ್ರಕ್ಕೆ ತೆರಳಲಿದ್ದಾರೆ. ಇವರ ಜೊತೆಗೆ ಸಿಸಿಬಿ ಡಿಸಿಪಿ ಕೌಶಲೇಂದ್ರ ಕುಮಾರ್ ಸಹ ಕೇಂದ್ರ ನಿಯೋಜನೆಗೆ ತೆರಳಲಿದ್ದಾರೆ ಎಂದು ಫೇಸ್ ಬುಕ್ ನಲ್ಲಿ ಪ್ರತಾಪ್ ಸಿಂಹ ಪೋಸ್ಟ್ ಹಾಕಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ರೂಪಾ, ಅಧಿಕಾರಿಗಳಲ್ಲಿ ರಾಜಕೀಯ ತರುವುದು ಸಮಾಜಕ್ಕೆ ಹಾಗೂ ವ್ಯವಸ್ಥೆಗೆ ದೀರ್ಘಕಾಲದಲ್ಲಿ ಒಳಿತು ಮಾಡಲು ಸಾಧ್ಯವಿಲ್ಲ, ಮಧುಕರ್ ಶೆಟ್ಟಿಗೆ ರಾಜ್ಯದಲ್ಲಿ ಉತ್ತಮ ಪೋಸ್ಟಿಂಗ್ ನೀಡಿರಲಿಲ್ಲ, ಹಾಗಾಗಿ ಕೇಂದ್ರ ಸೇವೆಗೆ ತೆರಳುತ್ತಿದ್ದಾರೆ ಎಂಬುದು ನಿಮ್ಮ ಕಲ್ಪನೆ, ಆದರೆ ಇಲ್ಲಿ ಒಳ್ಳೆಯ ಮತ್ತು ಕೆಟ್ಟ ಪೋಸ್ಟಿಂಗ್ ಇಲ್ಲ ಎಂಬುದು ಸತ್ಯ. ನಿಮ್ಮ ಪ್ರಕಾರ ಸರ್ಕಾರ ಮಧುಕರ್ ಶೆಟ್ಟಿ ಅವರಿಗೆ ಉತ್ತಮ ಪೋಸ್ಟಿಂಗ್ ಕೊಟ್ಟಿಲ್ಲ, ಆದರೆ ಹಿಂದಿನ ಸರ್ಕಾರ ಕೂಡ ಮಧುಕರ್ ಶೆಟ್ಟಿಗೆ ಒಳ್ಳೆಯ ಪೋಸ್ಟಿಂಗ್ ನೀಡಿರಲಿಲ್ಲ ಎಂದು ಬರೆದಿದ್ದಾರೆ.

ಲೋಕಾಯುಕ್ತದಲ್ಲಿ ನಡೆದಿದ್ದ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಬಯಲಿಗೆಳೆದಿದ್ದವರು ಸೋನಿಯಾ ನಾರಂಗ್ ಯಾವ ಅವಕಾಶವೂ ಇಲ್ಲದೇ ಕೇಂದ್ರ ಸೇವೆಗೆ ತೆರಳುತ್ತಿದ್ದಾರೆ ಎಂದು ಹೇಳಿದ್ದೀರಿ. ನಾವು, ಅಂದರೆ ಅಧಿಕಾರಿಗಳು ಇದರ ವಿರುದ್ಧ ಹೇಗೆ ಹೋರಾಟ ನಡೆಸಬೇಕು ಎಂಬುದರ ಬಗ್ಗೆ ನಮಗೆ ತಿಳಿದಿದೆ ಎಂದು ರೂಪಾ ತಿಳಿಸಿದ್ದಾರೆ. ರಾಜಕಾರಣಿಗಳ ಜೊತೆಗೆ ಅಧಿಕಾರಿವರ್ಗದ ಸಂಬಂಧ ಸಾರ್ವಜನಿಕ ದ್ವೇಷಕ್ಕೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.

ಪ್ರತಾಪ್ ಸಿಂಹ ಪ್ರತಿಕ್ರಿಯೆ, ಸ್ಪಷ್ಟನೆ
 
ಇನ್ನು ತಮ್ಮ ಫೇಸ್ ಬುಕ್ ಪೋಸ್ಟ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಸದ ಪ್ರತಾಪ್ ಸಿಂಹ, ಖಾಸಗಿ ಮಾಧ್ಯಮವೊಂದರ "ವರದಿಯನ್ನಷ್ಟೇ ನನ್ನ ಫೇಸ್ ಬುಕ್ ನ ಪೋಸ್ಟ್ ನಲ್ಲಿ ರೀಪೊಸ್ಟ್ ಮಾಡಿದ್ದೇನೆ ನಿಮಗೆ ಬಿಡುವಿದ್ದರೆ ಅದನ್ನು ಓದಿ" ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಸ್ಪಷ್ಟನೆ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com