ಬೆಂಗಳೂರು: ಹಲವು ವಿದ್ಯಾರ್ಥಿ ಸಂಘಟನೆಗಳ ಬೇಡಿಕೆಗಳಿಗೆ ಮಣಿದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಈ ತಿಂಗಳು ಆರಂಭವಾಗಬೇಕಿದ್ದ ಎಲ್ಲಾ ಪರೀಕ್ಷೆಗಳನ್ನು ಮುಂದೂಡಿದೆ.
ಮರುಮೌಲ್ಯಮಾಪನ ಫಲಿತಾಂಶವನ್ನು ತಡವಾಗಿ ಬಿಡುಗಡೆ ಮಾಡಿದ್ದನ್ನು ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರಿಂದ ವಿವಿ ಈ ತೀರ್ಮಾನ ಕೈಗೊಂಡಿದೆ.
ಮರುಮೌಲ್ಯಮಾಪನ ಫಲಿತಾಂಶ ತಡವಾದದ್ದರಿಂದ ಕೆಲವು ವಿದ್ಯಾರ್ಥಿಗಳು ಮುಂದಿನ ಮರು ಮೌಲ್ಯಮಾಪನ ಶುಲ್ಕದ ಜೊತೆಗೆ ಪರೀಕ್ಷಾ ಶುಲ್ಕಗಳನ್ನು ಪಾವತಿಸಬೇಕಾಗುತ್ತಿತ್ತು.
ಬೆಂಗಳೂರಿನಲ್ಲಿ ಈ ಬಗ್ಗೆ ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ಕರಿಸಿದ್ದಪ್ಪ, ಅಂತಿಮ ಬಿಇ ವರ್ಷದ ಪರೀಕ್ಷೆಗಳು ಇದೇ 5ರಂದು ಆರಂಭವಾಗಬೇಕಿದ್ದು, ಅದನ್ನು ಮುಂದೂಡಲಾಗಿದ್ದು ಇದೇ 12ರಂದು ನಡೆಯಲಿದೆ.
ಇತರ ಕೆಳ ಹಂತದ ಸೆಮೆಸ್ಟರ್ ಪರೀಕ್ಷೆಗಳು ಜೂನ್ 23ರಂದು ಆರಂಭವಾಗಲಿದೆ. ಪದವಿ ಮತ್ತು ಸ್ನಾತಕೋತ್ತರ ಪರೀಕ್ಷೆಗಳು ಜುಲೈ 31ರಂದು ಮುಗಿಯಲಿದೆ ಎಂದು ತಿಳಿಸಿದರು.
ವಿವರವಾದ ವೇಳಾಪಟ್ಟಿ ಇದೇ 3ರಂದು ಘೋಷಿಸಲಾಗುವುದು ಎಂದು ಹೇಳಿದರು.