ಮೈಸೂರು: ಕಳೆದ ಐದು ದಿನಗಳಿಂದ ನಾಪತ್ತೆಯಾಗಿದ್ದ ನವವಿವಾಹಿತೆ ಶವವಾಗಿ ಪತ್ತೆಯಾಗಿದ್ದಾಳೆ. ಇದೇ ವೇಳೆ ಸೊಸೆಯ ಸಾವಿನ ಸುದ್ದಿ ಕೇಳಿದ ಮಾವ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೈಸೂರಿನಲ್ಲಿ ನಡೆದ ಘಟನೆಯಲ್ಲಿ ರುಕ್ಮಿಣಿ (24 ) ಸಾವನ್ನಪ್ಪಿದ ನತದೃಷ್ಟೆಯಾಗಿದ್ದು ತಮ್ಮ ಸೊಸೆಯ ಸಾವಿನಿಂದ ನೊಂದ ಮಾವ ರಮೇಶ್ (50) ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೂರು ತಿಂಗಳ ಹಿಂದೆ ಶಾದಮಹಳ್ಳಿಯ ಪುನೀತ್ ನನ್ನು ವಿವಾಹವಾಗಿದ್ದ ರುಕ್ಮಿಣಿ . ಅ.27ರಂದು ಪತಿಯೊಡನೆ ಜಗಳ ಮಾಡಿಕೊಂಡು ಮನೆ ತೊರೆದು ಹೋಗಿದ್ದಳು. ಮೈಸೂರು ಗ್ರಾಮಾಂತರ ಪೋಲೀಸ್ ಠಾಣೆ ವ್ಯಾಪ್ತಿಯ ಗೊರೂರಿನ ವರುಣಾ ನಾಲೆಯಲ್ಲಿ ಇಂದು ರುಕ್ಮಿಣಿ ಮೃತದೇಹ ಪತ್ತೆಯಾಗಿತ್ತು.
ಮಗ ಹಾಗೂ ಸೊಸೆ ನಡುವಿನ ಭಿನ್ನಾಭಿಪ್ರಾಯದಿಂದ ನೊಂದಿದ್ದ ಮಾವ ರಮೇಶ್ ಇದೀಗ ಸೊಸೆ ಸಾವಿನಿಂದ ನೊಂದು ಶ್ರೀರಂಗಪಟ್ಟಣದ ಪಾಲಹಳ್ಳಿಯ ಜಮೀನಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.