ಬೆಂಗಳೂರು: ಗೋವಾ ಮದ್ಯವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಮೂವರನ್ನು ಬೆಂಗಳೂರು ಅಬಕಾರಿ ಪೊಲೀಸರು ಬಂಧಿಸಿದ್ದಾರೆ ಮತ್ತು ಅವರುಗಳಿಂದ 250 ಲೀಟರ್ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ
ಬಂಧಿತರನ್ನು ಪ್ರವೀಣ್ ನಾಯಕ, ಮುಕುಂದದತ್ತ ಖಂಡೇಕರ್, ನಾರಾಯಣ ಎಂದು ಗುರುತಿಸಲಾಗಿದ್ದು ಹಲವಾರು ವರ್ಷಗಳಿಂದ ಅವರುಗಳು ಈ ದಂಧೆಯಲ್ಲಿ ತೊಡಗಿಕೊಂಡಿದ್ದರೆಂದು ತಿಳಿದುಬಂದಿದೆ.
"ಅಂಕೋಲದಿಂದ ಬೆಂಗಳೂರಿಗೆ ಪ್ರಯಾಣಿಕರನ್ನು ಕರೆತಂದಿದ್ದ ಖಾಸಗಿ ಸಂಸ್ಥೆಯೆ ಬಸ್ ನಲ್ಲಿ ಅಕ್ರಮ ಮದ್ಯ ಸಾಗಾಟ ನಡೆಯುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಗಾಂಧಿನಗರದ ಸೀಬರ್ಡ್ ಟ್ರಾವೆಲ್ಸ್ ಕಚೇರಿಯ ಮುಂಭಾಗದಲ್ಲಿ ನಿಂತಿದ್ದ ಬಸ್ ನ್ನು ತಪಾಸಣೆ ನಡೆಸಿದಾಗ ಅಕ್ರಮ ಮದ್ಯ ದೊರಕಿದೆ" ಎಂದು ಬೆಂಗಳೂರು ನಗರ ಜಿಲ್ಲಾ ಅಬಕಾರಿ ಉಪ ಆಯುಕ್ತರು ಹೇಳಿದ್ದಾರೆ.