2016 - 17 ನೇ ಸಾಲಿನಲ್ಲಿ ಕೇವಲ 37 ಸಾವಿರ ದಲಿತ ವಿದ್ಯಾರ್ಥಿಗಳಿಗೆ ಹಂಚಿಕೆಯಾದ ಲ್ಯಾಪ್ ' ಟಾಪ್ ಯೋಜನೆಯ ಮುಂದುವರಿದ ಯೋಜನೆ ಇದಾಗಿದ್ದು , ಕಳೆದ ವರ್ಷದ ಮಾದರಿಯಲ್ಲೇ ಲ್ಯಾಪ್ಟಾಪ್ ಖರೀದಿಸಬೇಕಿತ್ತು. ಆದರೆ ಏಕಾಏಕಿ ಪ್ರತಿ ಲ್ಯಾಪ್ಟಾಪ್ ದರವನ್ನು ಹಿಂದಿನ ದರಕ್ಕಿಂತ 10 ಸಾವಿರ ರು. ಗಳಷ್ಟು ಹೆಚ್ಚಳ ಮಾಡಿದ್ದಲ್ಲದೇ ಒಂದೂವರೆ ಲಕ್ಷ ಲ್ಯಾಪ್ಟಾಪ್ ಖರೀದಿಯನ್ನು ನಾಲ್ಕು ಭಾಗಗಳಾಗಿ ತುಂಡು ಗುತ್ತಿಗೆ ಮೂಲಕ ಖರೀದಿಸಲು ಉನ್ನತ ಶಿಕ್ಷಣ ಇಲಾಖೆ ಕಡತ ಮಂಡಿಸಿತು. ಆಗ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರಾಗಿದ್ದ ಡಾ.ಎಂ.ಎನ್.ಅಜಯ್ ನಾಗಭೂಷಣ್ , ' ಈ ಪ್ರಕ್ರಿಯೆ ಸರಿಯಿಲ್ಲ. ಹೀಗಾಗಿ ಇಡೀ ಟೆಂಡರ್ ಪ್ರಕ್ರಿಯೆ ತಡೆಯಿರಿ ' ಎಂದು ಸರ್ಕಾರಕ್ಕೆ ಪತ್ರ ಬರೆದರು. ಆದರೂ ಟೆಂಡರ್ ಪ್ರಕ್ರಿಯೆಗೆ ಸರ್ಕಾರ ತಡೆ ನೀಡದ ಕಾರಣ , ಆಯುಕ್ತ ಅಜಯ್ ನಾಗಭೂಷಣ್ ಕಡತಕ್ಕೆ ಸಹಿ ಹಾಕಲಿಲ್ಲ. ಇದರ ಬೆನ್ನಲ್ಲೇ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಹುದ್ದೆಯಿಂದ ಡಾ. ಅಜಯ್ ಅವರನ್ನು ಎತ್ತಂಗಡಿ ಮಾಡಲಾಯಿತು. ಹೀಗಾಗಿ ಮನನೊಂದ ಡಾ.ಅಜಯ್ ನಾಗಭೂಷಣ್ ಉನ್ನತ ಶಿಕ್ಷಣ ಇಲಾಖೆಯಲ್ಲಿ ನಡೆಯುತ್ತಿರುವ ಲ್ಯಾಪ್ಟಾಪ್ ಹಗರಣ ಸೇರಿದಂತೆ ಹಲವು ಅಕ್ರಮಗಳ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಕುಂಟಿಯಾ ಅವರಿಗೆ ದಾಖಲೆಗಳ ಸಹಿತ ಸುದೀರ್ಘ ಪತ್ರ ಬರೆದಿದ್ದಾರೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.