ಬೆಂಗಳೂರು:: ಬಿಡದಿ ಧ್ಯಾನಪೀಠ ದ ನಿತ್ಯಾನಂದ ಸ್ವಾಮಿಗೆ 7 ವರ್ಷ ಹಿಂದಿನ ರಾಸಲೀಲೆ ಪ್ರಕರಣದಲ್ಲಿ ಮತ್ತೆ ಸಂಕಷ್ಟ ಎದುರಾಗಿದೆ. ರಾಸಲೀಲೆ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದ್ದು ಸಿಡಿಯಲ್ಲಿರುವುದು ನಿತ್ಯಾನಂದನೇ ಎಂದು ದೆಹಲಿಯ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್ ಎಸ್ ಎಲ್) ವರದಿ ಮಾಡಿರುವುದಾಗಿ ಮಾದ್ಯಮಗಳಲ್ಲಿ ವರಿಯಾಗಿದೆ.
2010ರಲ್ಲಿ ತಮಿಳು ನಟಿಯೊಂದಿಗೆ ರಾಸಲೀಲೆಯಲ್ಲಿ ತೊಡಗಿರುವುದು ನಿತ್ಯಾನಂದ ಸ್ವಾಮಿಯೇ ಎಂಬುದು ಇದೀಗ ಖಚಿತಪಟ್ಟಿದ್ದು ಸ್ವಾಮಿ ನಿತ್ಯಾನಂದನೇ ಎನ್ನುವುದನ್ನು ದೃಢಪಡಿಸಿರುವ ವರದಿ ಮುಂದಿನ ದಿನಗಳಲ್ಲಿ ನ್ಯಾಯಾಲಯದಲ್ಲಿ ಪ್ರಮುಖ ಸಾಕ್ಷಿಯಾಗಲಿದೆ.
ನಿತ್ಯಾನಂದನ ರಾಸಲೀಲೆ ವಿರುದ್ಧ ನಿತ್ಯ ಧರ್ಮಾನಂದಾ ಅಲಿಯಾಸ್ ಲೆನಿನ್ ಕರುಪ್ಪನ್ ತಮಿಳುನಾಡಿನಲ್ಲಿ ದೂರು ದಾಖಲಿಸಿದ್ದರು. ಬಳಿಕ ಪ್ರಕರಣದ ವಿಚಾರಣೆಯನ್ನು ತಮಿಳುನಾಡು ಪೊಲೀಸರು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೂಲಕ ಬಿಡದಿ ಪೊಲೀಸ್ ಠಾಣೆಗೆ ವರ್ಗಾಯಿಸಿದರು. 2010ರಲ್ಲಿ ಅಂದಿನ ಸಿಐಡಿ ಡಿವೈಎಸ್ಪಿ ಚರಣ್ ರೆಡ್ಡಿ ಈ ವರದಿ ಸಲ್ಲಿಕೆ ಮಾಡಿದ್ದು ಸಿಡಿಯಲ್ಲಿರುವುದು ನಿತ್ಯಾನಂದ ಎಂದು ಖಚಿತ ಪಡಿಸಿಕೊಳ್ಳಲು ಸಿಡಿಯನ್ನ ದೆಹಲಿಯ ಎಫ್ಎಸ್ಎಲ್ಗೆ ಕಳುಹಿಸಲಾಗಿತ್ತು.
"ಸಿಡಿಯಲ್ಲಿರುವುದು ನಾನಲ್ಲ, ಇದು ತಿರುಚಿದ ದೃಷ್ಯ" ವೆಂದು ಅಂದು ನಿತ್ಯಾನಂದ ಆರೋಪಿಸಿದ್ದಲ್ಲದೆ ಮಾಧ್ಯಮಗಳ ವಿರುದ್ಧವೂ ಹರಿಹಾಯ್ದಿದ್ದ. ಅಂದಿನ ದಿನಗಳಲ್ಲಿ ಈ ಪ್ರಕರಣ ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಆಫರೆ ಇದೀಗ ಪ್ರಯೋಗಾಲಯದ ವರದಿ ಬಂದಿದ್ದು ನಿತ್ಯಾನಂದನ ಮುಖವಾಡ ಕಳಚಿದೆ.