ಬೆಂಗಳೂರು: ಒಂದೆಡೆ ಬಿಡದಿಯ ನಿತ್ಯಾನಂದ ಸ್ವಾಮಿಯ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬರುತ್ತಿದ್ದರೆ, ಇನ್ನೊಂದೆಡೆ ಅವರ ವಿದೇಶಿ ಭಕ್ತರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಮ್ಮ ವಿರುದ್ಧ ಲೈಂಗಿಕ ಕಿರುಕುಳ ನಡೆದಿದೆ ಎಂದು ಆರೋಪಿಸಿದ್ದಾರೆ.
ಈ ಸಂಬಂಧ ನಿತ್ಯಾನಂದ ಸ್ವಾಮಿಯ ಭಕ್ತೆಯೊಬ್ಬರು ಫೇಸ್ ಬುಕ್ ನಲ್ಲಿ ವಿಡಿಯೊವನ್ನು ಅಪ್ ಲೋಡ್ ಮಾಡಿದ್ದು change.org. ಎಂಬ ವೆಬ್ ಸೈಟ್ ನಲ್ಲಿ ತಮ್ಮ ಬೇಡಿಕೆಗಳನ್ನು ಮುಂದಿಡಲು ಆರಂಭಿಸಿದ್ದಾರೆ.
ಕೆನಡಾ ಮೂಲದ ಮಹಿಳೆ ಕಥ್ಲೀನ್ ಬಿಕ್ಕರ್ಟ್ ಎನ್ನುವವರು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಲಸೆ ಮತ್ತು ಭದ್ರತಾ ಅಧಿಕಾರಿಗಳು ಆರೋಪಿಸಿ, ನಿತ್ಯಾನಂದ ಸ್ವಾಮಿಗಳ ಭಕ್ತರಿಗೆ ತೊಂದರೆ ಕೊಡುವುದಲ್ಲದೆ ಕೆಲವರಿಗೆ ಲೈಂಗಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ವಿಮಾನ ನಿಲ್ದಾಣದ ವಲಸೆ ವಿಭಾಗದ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಈ ಆರೋಪ ತಮ್ಮ ಗಮನಕ್ಕೆ ಬಂದಿಲ್ಲ ಎಂದು ಹೇಳಿದ್ದಾರೆ. ಆರೋಪ ನಿಜವೆಂದು ಸಾಬೀತಾದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ವೆಬ್ ಸೈಟ್ ನಲ್ಲಿನ ಅರ್ಜಿ ಮತ್ತು ವಿಡಿಯೊ ಎರಡನ್ನೂ ಮೊನ್ನೆ ಭಾನುವಾರ ಅಪ್ ಲೋಡ್ ಮಾಡಲಾಗಿದೆ. ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಉಲ್ಲೇಖಿಸಿ ಅರ್ಜಿಯನ್ನು ಅಪ್ ಲೋಡ್ ಮಾಡಲಾಗಿದೆ.
ವಿಡಿಯೊದಲ್ಲಿ 2012ರಲ್ಲಿ ನಡೆದ ಘಟನೆಯನ್ನು ವಿದೇಶಿ ಮೂಲದ ಮಹಿಳೆ ವಿವರಿಸಿದ್ದಾರೆ. ವಲಸೆ ವಿಭಾಗದ ಅಧಿಕಾರಿಗಳು ನಿತ್ಯಾನಂದ ಸ್ವಾಮಿ ನಿಮ್ಮನ್ನು ಎಷ್ಟು ಬಾರಿ ಮುಟ್ಟಿದರು ಎಂದು ಕೇಳಿದರು. ಅದಕ್ಕೆ ತಾವು ಒಂದು ಬಾರಿಯೂ ತಮ್ಮನ್ನು ಸ್ಪರ್ಶಿಸಿಲ್ಲವೆಂದಾಗ ಅದಕ್ಕಾಗಿ ನಿಮ್ಮನ್ನು ವಾಪಸ್ ಕಳುಹಿಸುತ್ತಿರಬೇಕು ಎಂದು ಅಪಹಾಸ್ಯ ಮಾಡಿದರು. ಇನ್ನೂ ಅನೇಕ ಅಸಂಬದ್ಧ ಪ್ರಶ್ನೆಗಳನ್ನು ಕೇಳಿದರು. ಇತ್ತೀಚೆಗೆ ಆಸ್ಟ್ರೇಲಿಯಾ ಮೂಲದ ಮಹಿಳೆಗೆ ಕೂಡ ನಿತ್ಯಾನಂದನ ಆಶ್ರಮಕ್ಕೆ ಹೋಗಲು ಅವಕಾಶ ನೀಡಿರಲಿಲ್ಲ. ನಿತ್ಯಾನಂದ ಸ್ವಾಮಿ ಮೋಸಗಾರ, ಅವನನ್ನು ಅನುಸರಿಸಬೇಡಿ, ನಿಮ್ಮ ಒಳ್ಳೆಯದಕ್ಕೆ ಹೇಳುತ್ತಿದ್ದೇವೆ, ನಿಮ್ಮ ದೇಶಕ್ಕೆ ವಾಪಸಾಗಿ ಎಂದು ಹೇಳಿದರಂತೆ ಎಂಬುದಾಗಿ ಮಹಿಳೆ ವಿವರಿಸಿದ್ದಾರೆ.
ಈ ಬಗ್ಗೆ ಪತ್ರಿಕೆಗೆ ಪ್ರತಿಕ್ರಿಯಿಸಿದ ವಿದೇಶಿ ಸ್ಥಳೀಯ ದಾಖಲಾತಿ ಕಚೇರಿಯ ಜಂಟಿ ನಿರ್ದೇಶಕ ಲಬು ರಾಮ್, ಇಂತಹ ವಿಚಾರ ತಮ್ಮ ಗಮನಕ್ಕೆ ಬಂದಿಲ್ಲ. ವೀಸಾ ನಿಯಮ ಉಲ್ಲಂಘನೆಯಾದರೆ ಮಾತ್ರ ವ್ಯಕ್ತಿಗಳನ್ನು ಹಿಂದಕ್ಕೆ ಕಳುಹಿಸಲು ಸಾಧ್ಯ. ನಾವು ಈ ವಿಷಯದ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಹೇಳಿದ್ದಾರೆ.
Advertisement